ಉಡುಪಿ : ಓದಿನ ಕಡೆ ಗಮನಕೊಡು ಎಂದಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಫೋನಿನಲ್ಲಿ ಮಾತನಾಡಿಕೊಂಡಿದ್ದ ಮಗಳಿಗೆ ಫೋನ್ ಬೇಡ, ಓದಿನ ಕಡೆ ಗಮನಕೊಡು ಎಂದು ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಉಡುಪಿ ಜಿಲ್ಲೆ ಹಿರೇಬೆಟ್ಟು ಗ್ರಾಮದ ಬಾಲ್ಕಟ್ಟು ಎಂಬಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಸಮನ್ವಿ ಎಂದು ಗುರುತಿಸಲಾಗಿದೆ. ಬಾಲ್ಕಟ್ಟು ನಿವಾಸಿ ಮಲ್ಲಿಕಾ ಎಂಬವರ ಪುತ್ರಿ ಸಮನ್ವಿ ಉಡುಪಿ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಡಿಸೆಂಬರ್ 26ರಂದು ಈ ಘಟನೆ ಸಂಭವಿಸಿದ್ದು ಮುಂಬರುವ ಪರೀಕ್ಷೆಗೆ ಉತ್ತಮ ತಯಾರಿ ನಡೆಸಬೇಕು ಎಂದು ತಾಯಿ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ .
ತಾಯಿಯ ಮಾತನ್ನು ಕಿವಿಗೆ ಹಾಕಿಕೊಳ್ಳದ ಸಮನ್ವಿ ಫೋನಿನಲ್ಲಿ ಮಾತನಾಡುವುದನ್ನು ಮುಂದುವರಿಸಿದ್ದಳು. ಈ ಸಂದರ್ಭದಲ್ಲಿ ತಾಯಿ ಮಲ್ಲಿಕಾ ಪರೀಕ್ಷೆಗೆ ಓದಿಕೊಳ್ಳಬೇಕೆಂದು ಮಗಳಿಗೆ ಹೇಳಿದ್ದರು. ಇದಕ್ಕೆ ಮನನೊಂದ ವಿದ್ಯಾರ್ಥಿನಿ ಸಮನ್ವಿ ಸೀದಾ ತನ್ನ ಬೆಡ್ರೂಮಿಗೆ ತೆರಳಿ ನೇಣು ಹಾಕಿಕೊಂಡಿದ್ದಾಳೆ.
ಇದನ್ನೂ ಓದಿ: ಬುರುಡೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ : ಬುರುಡೆ ಜೊತೆ ರಾತ್ರಿ ಕಳೆದಿದ್ದರಂತೆ ಸುಜಾತಾ ಭಟ್..!
ಕೂಡಲೇ ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಲಾಯ್ತಾದರೂ ಸಮನ್ವಿ ಮೃತಪಟ್ಟಿದ್ದಾಳೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.



