Kannada News Next

entertainment

ದರ್ಶನ್‌ಗೆ  ಹೆಚ್ಚಿದ ಆತಂಕ: ಪ್ರದೋಷ್ ಬಳಿಕ ಮತ್ತಿಬ್ಬರು ಮಾಫಿ ಸಾಕ್ಷಿಯಾಗಲು ಅರ್ಜಿ!

ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಕಾನೂನು ಸಂಕಷ್ಟಗಳು ಒಂದಾದ ಮೇಲೊಂದರಂತೆ ಎದುರಾಗುತ್ತಿವೆ.

By Meghana Pranuth | ಮೇಘನಾ ಪ್ರಣೂತ್‌
DHARSHAN

ಚಿತ್ರದುರ್ಗದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಕಾನೂನು ಸಂಕಷ್ಟಗಳು ಒಂದಾದ ಮೇಲೊಂದರಂತೆ ಎದುರಾಗುತ್ತಿವೆ.

ಪ್ರಕರಣದ ಎ14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ನಡುವೆಯೇ, ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರದೋಷ್ ಹಾದಿಯಲ್ಲೇ ಮತ್ತಿಬ್ಬರು ಆರೋಪಿಗಳು ಮಾಫಿ ಸಾಕ್ಷಿಯಾಗಲು ಮುಂದಾಗಿದ್ದಾರೆ.

 ಪ್ರದೋಷ್ ಜೊತೆ ಮತ್ತಿಬ್ಬರು ಮಾಫಿ ಸಾಕ್ಷಿ?

ಪ್ರಕರಣದ ಎ8 ಆರೋಪಿ ರವಿಶಂಕರ್ ಹಾಗೂ ಎ10 ಆರೋಪಿ ವಿನಯ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ತಮ್ಮ ಕಕ್ಷಿದಾರರನ್ನೂ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಕೋರಿದ್ದಾರೆ. ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ರವಿಶಂಕರ್ ಹಾಗೂ ವಿನಯ್ ಪರ ವಕೀಲರು, ಈ ಕುರಿತು ಪ್ರತ್ಯೇಕ ಅರ್ಜಿ ಸಲ್ಲಿಸುವುದಾಗಿ ಪೀಠಕ್ಕೆ ತಿಳಿಸಿದ್ದಾರೆ. ಪ್ರದೋಷ್ ಬಳಿಕ ಈ ಇಬ್ಬರು ಆರೋಪಿಗಳೂ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ನಟ ದರ್ಶನ್ ಪಡೆಗೆ ನುಂಗಲಾರದ ತೂತಾಗಿ ಪರಿಣಮಿಸಿದೆ.

 ಮತ್ತಿಬ್ಬರು ಆರೋಪಿಗಳ ಮನವಿಯನ್ನು ತಮ್ಮ ಅರ್ಜಿಯೊಂದಿಗೆ ಸೇರಿಸಬಾರದು ಎಂದು ಎ14 ಪ್ರದೋಷ್ ಪರ ವಕೀಲ ದಿವಾಕರ್ ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಿದರು. "ಮೊದಲು ನಮ್ಮ ಕಕ್ಷಿದಾರ ಪ್ರದೋಷ್ ಅವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಲಿ, ಆ ನಂತರ ಪ್ರಾಸಿಕ್ಯೂಷನ್ ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಿ" ಎಂದು ಅವರು ಪ್ರತಿಪಾದಿಸಿದರು. ವಾದ-ಪ್ರತಿವಾದಗಳನ್ನು ಆಲಿಸಿದ 59ನೇ ಸೆಷನ್ಸ್ ನ್ಯಾಯಾಲಯವು ವಿಚಾರಣೆಯನ್ನು ಕೆಲಕಾಲ ಮುಂದೂಡಿದೆ.

 ಇನ್ನೊಂದೆಡೆ, ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿರುವ ಪ್ರದೋಷ್ ಪರ ವಕೀಲರು 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಮತ್ತೊಂದು ಪ್ರಮುಖ ಅರ್ಜಿ ಸಲ್ಲಿಸಿದ್ದಾರೆ. "ದರ್ಶನ್ ಅವರಿಂದ ಬೆದರಿಕೆ ಬರುವ ಅಥವಾ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ, ದರ್ಶನ್ ಇರುವ ಕೊಠಡಿಯನ್ನು ಬಿಟ್ಟು ತಮ್ಮನ್ನು ಪ್ರತ್ಯೇಕ ಜೈಲು ಕೊಠಡಿಯಿಂದ ವಿಚಾರಣೆಗೆ ಹಾಜರುಪಡಿಸಬೇಕು" ಎಂದು ಮನವಿ ಮಾಡಿದ್ದಾರೆ.