Kannada News Next

news

ನಿರಂತರ ಮಳೆ: ದಕ್ಷಿಣ ಕನ್ನಡದಲ್ಲಿ ಅಡಿಕೆ ಬೆಳೆಗಾರರಿಗೆ ಭಾರೀ ಸಂಕಷ್ಟ

ಕರಾವಳಿ ತೀರದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇದು ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಯನ್ನು ನಂಬಿಕೊಂಡಿರುವ ಕೃಷಿಕರ ನಿದ್ದೆಗೆಡಿಸಿದೆ.

By ಅನಿಲ್‌ ಗುಂಡ್ಮಿ | Anil Gundmi
Heavy Rain Causes Major Setback to Arecanut Cultivation in Dakshina Kannada

ಕರಾವಳಿ ತೀರದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇದು ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಯನ್ನು ನಂಬಿಕೊಂಡಿರುವ ಕೃಷಿಕರ ನಿದ್ದೆಗೆಡಿಸಿದೆ. ಈ ವರ್ಷ ಮುಂಗಾರು ಮಾರುತಗಳು ಕರಾವಳಿಗೆ ಪ್ರವೇಶಿಸಲು ಒಂದು ತಿಂಗಳು ತಡವಾಗಿದ್ದರೂ, ತದನಂತರ ಸುರಿಯುತ್ತಿರುವ ನಿರಂತರ ಮಳೆಯು ತೋಟಗಳನ್ನು ಜಲಾವೃತಗೊಳಿಸಿದೆ.

ಅಡಕೆ ಮರಗಳಿಗೆ ಮಳೆಗಾಲದಲ್ಲಿ ಎದುರಾಗುವ ಅತ್ಯಂತ ಭೀಕರವಾದ ಕೊಳೆ ರೋಗವನ್ನು ತಡೆಗಟ್ಟಲು ಬೋರ್ಡೋ ದ್ರಾವಣದ ಸಿಂಪಡಣೆ ಅತ್ಯಗತ್ಯ. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೋಟಗಳಿಗೆ ಇಳಿದು ಔಷಧ ಸಿಂಪಡಿಸಲು ರೈತರಿಗೆ ಬಿಡುವೇ ಸಿಗುತ್ತಿಲ್ಲ.

ಮಳೆಯ ನಡುವೆ ಸಿಂಪಡಿಸಿದರೂ ಔಷಧವು ತೊಳೆದು ಹೋಗುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಈಗಾಗಲೇ ಜಿಲ್ಲೆಯ ಬೆಳ್ತಂಗಡಿ ಸೇರಿದಂತೆ ಹಲವು ಭಾಗಗಳ ತೋಟಗಳಲ್ಲಿ ಎಳೆ ಅಡಕೆ ಕಾಯಿಗಳು ನೆಲಕ್ಕೆ ಉದುರಲಾರಂಭಿಸಿದ್ದು, ಇದು ತೋಟಗಾರರಲ್ಲಿ ಭೀತಿಯನ್ನು ಹೆಚ್ಚಿಸಿದೆ.

ರೈತರ ಪರಿಸ್ಥಿತಿ ಇಷ್ಟಕ್ಕೆ ಮುಗಿಯದೆ, ಮಾರುಕಟ್ಟೆಯಲ್ಲಿ ಔಷಧ ತಯಾರಿಕೆಗೆ ಬಳಸುವ ಮೈಲುತುತ್ತಿನ ಬೆಲೆ ದುಪ್ಪಟ್ಟಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಸಾಲಿನಲ್ಲಿ ಕೇವಲ 250 ರೂಪಾಯಿ ಆಸುಪಾಸಿನಲ್ಲಿದ್ದ ಒಂದು ಕೆಜಿ ಮೈಲುತುತ್ತಿನ ಬೆಲೆ, ಪ್ರಸಕ್ತ ವರ್ಷದಲ್ಲಿ 500 ರೂಪಾಯಿಗಳನ್ನು ದಾಟಿದೆ.

ಇದರೊಂದಿಗೆ ತೋಟದ ಕೆಲಸಗಳಿಗೆ ನುರಿತ ಕಾರ್ಮಿಕರ ಅಭಾವವೂ ತೀವ್ರವಾಗಿ ಕಾಡುತ್ತಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಕೃಷಿಕರ ನೆರವಿಗೆ ಧಾವಿಸಿರುವ ಸರ್ಕಾರಿ ತೋಟಗಾರಿಕೆ ಇಲಾಖೆಯು, ಮೈಲುತುತ್ತು ಖರೀದಿಗೆ ವಿಶೇಷ ಸಹಾಯಧನವನ್ನು ಘೋಷಿಸಿದೆ.

ಆಸಕ್ತ ಬೆಳೆಗಾರರು ತಕ್ಷಣವೇ ಅಗತ್ಯ ಜಿಎಸ್‌ಟಿ ರಸೀದಿಗಳು, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ ಹಾಗೂ ಭೂಮಿಯ ಆರ್‌.ಟಿ.ಸಿ ದಾಖಲೆಗಳೊಂದಿಗೆ ಸ್ಥಳೀಯ ಕಚೇರಿಗೆ ಅರ್ಜಿ ಸಲ್ಲಿಸಿ ಆರ್ಥಿಕ ನೆರವು ಪಡೆಯಬಹುದಾಗಿದೆ. ಕಳೆದ ವರ್ಷ ಭೀಕರ ನಷ್ಟ ಅನುಭವಿಸಿದ್ದ ಕರಾವಳಿಯ ರೈತ ಸಮುದಾಯವು, ಈ ಬಾರಿಯಾದರೂ ಉತ್ತಮ ಫಸಲು ಪಡೆಯಲು ಪ್ರಕೃತಿಯು ಕೊಂಚ ಬಿಡುವು ನೀಡಲಿ ಎಂದು ಪ್ರಾರ್ಥಿಸುತ್ತಿದೆ.