ರಾಜ್ಯದ ಪಡಿತರ ಚೀಟಿದಾರರಿಗೆ (Ration Card Holders) ರಾಜ್ಯ ಸರ್ಕಾರವು ದೊಡ್ಡ ಮಟ್ಟದ ನಿರಾಳತೆಯನ್ನು ನೀಡಿದೆ. ಪಡಿತರ ಚೀಟಿಗೆ ಕಡ್ಡಾಯವಾಗಿರುವ ಇ-ಕೆವೈಸಿ (E-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಧಿಸಲಾಗಿದ್ದ ಗಡುವನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ಸರ್ವರ್ ದೋಷ ಹಾಗೂ ತಾಂತ್ರಿಕ ಸಮಸ್ಯೆಯಿಂದಾಗಿ ಇ-ಕೆವೈಸಿ ಮಾಡಿಸಲು ಸಾರ್ವಜನಿಕರು ಪ್ರತಿದಿನ ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲುವಂತಾಗಿತ್ತು. ಜನರ ಈ ಪರದಾಟವನ್ನು ಗಮನಿಸಿದ ಸರ್ಕಾರ, ಕೊನೆಗೂ ಗಡುವನ್ನು ವಿಸ್ತರಿಸಿ ಮಹತ್ವದ ಹೆಜ್ಜೆ ಇಟ್ಟಿದೆ.
ಇ-ಕೆವೈಸಿ ಹಾಗೂ ಪಡಿತರ ವಿತರಣೆ ಸಾರ್ವಜನಿಕರಿಗೆ ಸುಲಭವಾಗುವಂತೆ ಮಾಡಲು, ಸರ್ಕಾರವು ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆಯ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿಯು ಬರುವ ಅಕ್ಟೋಬರ್ 1ರಿಂದ ರಾಜ್ಯಾದ್ಯಂತ ಕಡ್ಡಾಯವಾಗಿ ಜಾರಿಗೆ ಬರಲಿದೆ.
ಇನ್ಮುಂದೆ ಪ್ರತಿದಿನ ನ್ಯಾಯಬೆಲೆ ಅಂಗಡಿಗಳು ಎರಡು ಶಿಫ್ಟ್ಗಳಲ್ಲಿ (ಬೆಳಗ್ಗೆ ಮತ್ತು ಸಂಜೆ) ಕಾರ್ಯನಿರ್ವಹಿಸಲಿವೆ. ದಿನಪೂರ್ತಿ ಕೆಲಸ ಹಾಗೂ ಕೂಲಿ ಕಾರ್ಮಿಕ ಕೆಲಸಗಳಿಗೆ ತೆರಳುವ ಬಡ ಹಾಗೂ ಶ್ರಮಿಕ ವರ್ಗದ ಜನರಿಗೆ ಸಮಯದ ಹೊಂದಾಣಿಕೆ ಇಲ್ಲದೆ ಇ-ಕೆವೈಸಿ ಮಾಡಿಸಲು ಸಾಧ್ಯವಾಗುತ್ತಿರಲಿಲ್ಲ. ಹೊಸ ಡಬಲ್ ಶಿಫ್ಟ್ ವ್ಯವಸ್ಥೆಯಿಂದ ಇವರಿಗೆ ತುಂಬಾ ಅನುಕೂಲವಾಗಲಿದೆ.
ಅಕ್ಟೋಬರ್ 20 ಕೊನೆಯ ದಿನಾಂಕವಾಗಿರುವುದರಿಂದ, ಕೊನೆ ನಿಮಿಷದ ದಟ್ಟಣೆಯನ್ನು ತಪ್ಪಿಸಲು ಸಾರ್ವಜನಿಕರು ನಿಗದಿತ ಸಮಯದೊಳಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.