News Next Kannada

karnataka

ಸಾಲು ಸಾಲು ಹಬ್ಬಗಳ ಬೆನ್ನಲ್ಲೇ ದೇಶದ ಜನತೆಗೆ ಬಿಗ್​ಶಾಕ್ ​: ಐದೇ ದಿನಗಳಲ್ಲಿ ಸಕ್ಕರೆ ದರ ಭಾರೀ ಏರಿಕೆ

ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ 52 ರೂಪಾಯಿ ಆಸುಪಾಸಿನಲ್ಲಿದ್ದ ಸಕ್ಕರೆ ಬೆಲೆ ಶನಿವಾರದ ವೇಳೆಗೆ 64 ರೂಪಾಯಿಗೆ ಏರಿಕೆಯಾಗಿತ್ತು.

By ರಶ್ಮಿ ಎಸ್. | Rashmi S
sugar and jaggery price hike before festivals

ದೇಶದಲ್ಲಿ ಗೌರಿ-ಗಣೇಶ ಹಾಗೂ ದಸರಾ ಹಬ್ಬಗಳು ಹತ್ತಿರ ಬರುತ್ತಿರುವ ಬೆನ್ನಲ್ಲೇ, ಸಾಮಾನ್ಯ ಜನರ ಜೇಬಿಗೆ ಭಾರಿ ಕತ್ತರಿ ಬಿದ್ದಿದೆ. ಕೇವಲ ಐದೇ ದಿನಗಳಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆಗಳು ಗಗನಕ್ಕೇರಿದ್ದು, ಗ್ರಾಹಕರು ಹಾಗೂ ಸಿಹಿ ತಿಂಡಿ ತಯಾರಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲಿ ಸಕ್ಕರೆಯ ಚಿಲ್ಲರೆ ದರ ಈಗ ಪ್ರತಿಕಿಲೋಗೆ ಬರೋಬ್ಬರಿ 70 ರೂಪಾಯಿ ತಲುಪಿದ್ದರೆ, ಬೆಲ್ಲದ ದರವೂ ಕಿಲೋಗೆ 68 ರೂಪಾಯಿಗಿಂತ ಕೆಳಗಿಳಿಯುತ್ತಿಲ್ಲ.

ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ 52 ರೂಪಾಯಿ ಆಸುಪಾಸಿನಲ್ಲಿದ್ದ ಸಕ್ಕರೆ ಬೆಲೆ ಶನಿವಾರದ ವೇಳೆಗೆ 64 ರೂಪಾಯಿಗೆ ಏರಿಕೆಯಾಗಿತ್ತು. ಹೊಸ ದರದ ಸರಕುಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆ ಚಿಲ್ಲರೆ ದರ 70 ರೂಪಾಯಿಯ ಗಡಿ ದಾಟಿದೆ. ಇತ್ತ ಮಂಡ್ಯದ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಕ್ವಿಂಟಾಲ್ ಬೆಲ್ಲದ ಬೆಲೆ 2,000 ರೂಪಾಯಿಗಳಷ್ಟು ಭಾರಿ ಜಿಗಿತ ಕಂಡಿದೆ. ಕಬ್ಬಿನ ಪೂರೈಕೆಯಲ್ಲಿನ ಕೊರತೆ ಹಾಗೂ ಕಾರ್ಮಿಕರ ಅಭಾವದಿಂದಾಗಿ ಬೆಲ್ಲದ ಉತ್ಪಾದನೆ ಕುಸಿದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಈ ಬೆಲೆ ಏರಿಕೆಯು ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಸರ್ಕಾರದ ಇ20 ಅಂದರೆ ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯೇ ಈ ಪರಿಸ್ಥಿತಿಗೆ ಕಾರಣವೇ ಎಂಬ ಪ್ರಶ್ನೆ ಎದ್ದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಎಥನಾಲ್ ಉತ್ಪಾದನೆಗಾಗಿ ಕಬ್ಬನ್ನು ಅತಿಯಾಗಿ ಬಳಸುತ್ತಿರುವುದೇ ಸಕ್ಕರೆ ಕೊರತೆ ಮತ್ತು ಬೆಲೆ ಏರಿಕೆಗೆ ಕಾರಣವೇ ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ ಕೇಂದ್ರ ಸರ್ಕಾರ ಈ ಆರೋಪವನ್ನು ಕಡ್ಡಾಯವಾಗಿ ನಿರಾಕರಿಸಿದೆ. ಎಥನಾಲ್ ಯೋಜನೆಗೂ ಸಕ್ಕರೆ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಮಳೆಯ ಕೊರತೆಯಿಂದ ಕಬ್ಬಿನ ಇಳುವರಿ ಕಡಿಮೆಯಾಗಿರುವುದು, ಹಬ್ಬದ ಸೀಸನ್‌ನಲ್ಲಿ ದಿಢೀರ್ ಬೇಡಿಕೆ ಹೆಚ್ಚಾಗಿರುವುದು ಮತ್ತು ಮಾರುಕಟ್ಟೆಯಲ್ಲಿನ ಕೃತಕ ಅಭಾವವೇ ಇದಕ್ಕೆ ನೈಜ ಕಾರಣ ಎಂದು ಕೇಂದ್ರ ಸಮರ್ಥಿಸಿಕೊಂಡಿದೆ.