ಉಡುಪಿ / ಕೊಲ್ಲೂರು : ಕರ್ನಾಟಕದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪಾರ್ಕಿಂಗ್ ಆವರಣದಲ್ಲಿದ್ದ ಕಸದ ರಾಶಿಯನ್ನು ಜಿಲ್ಲಾಡಳಿತ ಹಾಗೂ ಶಾಸಕರ ಮುತುವರ್ಜಿಯಿಂದ ಒಂದೇ ದಿನದಲ್ಲಿ ತೆರವುಗೊಳಿಸಲಾಗಿದೆ. ಸದ್ಯ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಅವರ ಕಾರ್ಯಕ್ಕೆ ಎಲ್ಲೆಡೆಯಿಂದಲೂ ಬೆಂಬಲ ವ್ಯಕ್ತವಾಗಿದೆ.
ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರತಿನಿತ್ಯವೂ ಕೂಡ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಹೀಗೆ ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ವಾಹನಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗುತ್ತಿದೆ. ಪಾರ್ಕಿಂಗ್ ಮಾಡುವ ವಾಹನಗಳಿಗೆ ಶುಲ್ಕವನ್ನು ವಿಧಿಸಲಾಗುತ್ತಿದೆ. ಆದರೆ ಪಾರ್ಕಿಂಗ್ ಸ್ಥಳದಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ತುಂಬಿದ್ದರೂ ಕೂಡ ಅದನ್ನು ತೆರವು ಗೊಳಿಸಿರಲಿಲ್ಲ.
ಕರ್ನಾಟಕ ಹೈಕೋರ್ಟ್ ಖ್ಯಾತ ವಕೀಲರಾದ ಅಮಿತ್ ಶೆಟ್ಟಿ ಕುಂಭಾಶಿ ಅವರು, ಪಾರ್ಕಿಂಗ್ ಸ್ಥಳದಲ್ಲಿದ್ದ ಕಸದ ದುಃಸ್ಥಿತಿಯನ್ನು ಫೋಟೋ ಸಹಿತ ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಹಂಚಿಕೊಂಡಿದ್ದರು. ಪವಿತ್ರ ಪುಣ್ಯಕ್ಷೇತ್ರದ ಶುಚಿತ್ವಕ್ಕೆ ಧಕ್ಕೆಯಾಗುತ್ತಿರುವ ಕುರಿತು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಅವರ ಗಮನ ಸೆಳೆದಿದ್ದರು.
ಅಮಿತ್ ಕುಂಭಾಶಿ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ, ಎಚ್ಚೆತ್ತುಕೊಂಡ ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಮತ್ತು ಜಿಲ್ಲಾಧಿಕಾರಿ ಸ್ವರೂಪ ಟಿಕೆ ಅವರ ಮುತುವರ್ಜಿಯಿಂದ ಒಂದೇ ದಿನದಲ್ಲಿ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದಾರೆ.
ಕೊಲ್ಲೂರು ಕ್ಷೇತ್ರದಲ್ಲಿ ಶುಚಿತ್ವದ ಬಗ್ಗೆ ಪ್ರಶ್ನೆ ಎದ್ದ ಬೆನ್ನಲ್ಲೇ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಅವರು ತ್ಯಾಜ್ಯವನ್ನು ತೆರವು ಮಾಡುವಂತೆ, ಗ್ರಾಮ ಪಂಚಾಯತ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ಖಡಕ್ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ನಿರ್ದೇಶನದ ಬೆನ್ನಲ್ಲೇ ಕೊಲ್ಲೂರು ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸಿಬ್ಬಂದಿ ವಿಶೇಷ ಮುತುವರ್ಜಿ ವಹಿಸಿ ಕಾರ್ಯಾಚರಣೆಗೆ ಇಳಿದರು.
ಬೃಹತ್ ಪ್ರಮಾಣದಲ್ಲಿ ಬಿದ್ದಿದ್ದ ಕಸವನ್ನು ಕೇವಲ ಒಂದೇ ದಿನದಲ್ಲಿ ಸಂಪೂರ್ಣವಾಗಿ ತೆರವುಗೊಳಿಸಿ ಪಾರ್ಕಿಂಗ್ ಸ್ಥಳವನ್ನು ಸ್ವಚ್ಛಗೊಳಿಸಲಾಯಿತು. ಜಿಲ್ಲಾಡಳಿತದ ಕಾರ್ಯವೈಖರಿಗೆ ಸಾರ್ವಜನಿಕ ಶ್ಲಾಘನೆ ಸಮಸ್ಯೆ ಗಮನಕ್ಕೆ ಬಂದ ತಕ್ಷಣವೇ ಸ್ಪಂದಿಸಿ ಸ್ವಚ್ಛತಾ ಕಾರ್ಯ ಕೈಗೊಂಡ ಉಡುಪಿ ಜಿಲ್ಲಾಧಿಕಾರಿಗಳ ಸಾಮಾಜಿಕ ಕಾಳಜಿ ಮತ್ತು ದೇವಸ್ಥಾನ ಮಂಡಳಿಯ ಕ್ಷಿಪ್ರ ಕ್ರಮಕ್ಕೆ ದೇಶದಾದ್ಯಂತ ಇರುವ ಮೂಕಾಂಬಿಕಾ ದೇವಿಯ ಭಕ್ತರು ಹಾಗೂ ಸ್ಥಳೀಯ ಸಾರ್ವಜನಿಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಡಿಸಿ ಅವರ ಈ ಕಾರ್ಯವೈಖರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಭಕ್ತರ ಧಾರ್ಮಿಕ ಪ್ರಜ್ಞೆ ಮತ್ತು ಜವಾಬ್ದಾರಿ ಅಗತ್ಯ. ಒಂದೆಡೆ ಆಡಳಿತ ಮಂಡಳಿ ಕಸ ತೆರವುಗೊಳಿಸಿ ಮಾದರಿ ಎನಿಸಿಕೊಂಡಿದ್ದರೂ, ಇನ್ನೊಂದೆಡೆ ದೇವಸ್ಥಾನಕ್ಕೆ ಆಗಮಿಸುವ ಕೆಲ ಭಕ್ತರು ಧಾರ್ಮಿಕ ಕ್ಷೇತ್ರದ ಶುಚಿತ್ವದ ಅರಿವಿಲ್ಲದೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲಿ ಹಾಗೂ ತ್ಯಾಜ್ಯ ಎಸೆಯುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಪವಿತ್ರ ಧಾರ್ಮಿಕ ಕ್ಷೇತ್ರಗಳ ನೈರ್ಮಲ್ಯವನ್ನು ಕಾಯ್ದುಕೊಳ್ಳುವುದು ಕೇವಲ ಆಡಳಿತ ಮಂಡಳಿ ಅಥವಾ ಪಂಚಾಯತ್ನ ಹೊಣೆಯಷ್ಟೇ ಅಲ್ಲ, ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತಾದಿಯ ಜವಾಬ್ದಾರಿಯಾಗಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ಮತ್ತು ದೇವಸ್ಥಾನದ ಸುತ್ತಮುತ್ತ ಕಸದ ಬುಟ್ಟಿಗಳನ್ನು ಬಳಸುವ ಮೂಲಕ ಪ್ರತಿಯೊಬ್ಬರೂ ಸ್ವಚ್ಛತೆಗೆ ಸಹಕರಿಸಬೇಕಿದೆ. ಸಮಸ್ಯೆಗಳು ಕಂಡು ಬಂದಾಗ ಸಾರ್ವಜನಿಕರು ಪ್ರಶ್ನೆ ಮಾಡಿದ್ರೆ ಮಾತ್ರವೇ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯ.