ಉಡುಪಿ : ಅವಧಿ ಮೀರಿ ಗೇಮ್ಸ್ ಸೆಂಟರ್ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಟಿ ಅರೇನಾ ಗೇಮ್ಸ್ ಸೆಂಟರ್ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಪೊಲೀಸ್ ಠಾಣೆಯ ಎಎಸ್ಐ ವಿವೇಕಾನಂದ ಅವರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ರಾತ್ರಿ ಸುಮಾರು 12.45ರ ವೇಳೆಗೆ ಶಿವಳ್ಳಿ ಗ್ರಾಮದ ಮಣಿಪಾಲ- ಆಗುಂಬೆ ರಸ್ತೆಯಲ್ಲಿ ಇರುವ ಸಿಟಿ ಅರೇನಾ ಗೇಮ್ಸ್ ಸೆಂಟರ್ನಲ್ಲಿ ಅತಿಯಾದ ಶಬ್ದದ ಜೊತೆಗೆ ಗೇಮ್ಸ್ ಆಡುತ್ತಿರುವುದು ಕಂಡು ಬಂದಿದೆ.
ಅಲ್ಲದೇ ಉಡುಪಿ ನಗರದ ವಿವಿಧ ಭಾಗಗಳಿಂದ ಸಾರ್ವಜನಿಕರು ಅರೇನಾ ಗೇಮ್ಸ್ ಸೆಂಟರ್ಗೆ ತಡರಾತ್ರಿಯವರೆಗೂ ಜಮಾಯಿಸುತ್ತಿದ್ದು, ಸ್ಥಳೀಯ ಅಪಾರ್ಟ್ಮೆಂಟ್ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.
ಪೊಲೀಸರು ತಡರಾತ್ರಿಯ ವೇಳೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆಯಲ್ಲಿ ಗೇಮ್ಸ್ ಸೆಂಟರ್ ನಡೆಯುತ್ತಿರುವುದು ಪತ್ತೆಯಾಗಿತ್ತು. ಸದ್ಯ ವಿಡಿಯೋ ದಾಖಲಿಸಿಕೊಂಡು ಗೇಮ್ಸ್ ಸೆಂಟರ್ಗೆ ಪೊಲೀಸರು ಬಾಗಿಲು ಮುಚ್ಚಿಸಿದ್ದಾರೆ.
ಮಣಿಪಾಲ ಠಾಣೆಯ ಪೊಲೀಸರು ಈಗಾಗಲೇ ಗೇಮ್ಸ್ ಸೆಂಟರ್ ನ ಮ್ಯಾನೇಜರ್ ಸತ್ಯ ಸ್ವರೂಪ್ ಅವರಿಗೆಈ ಹಿಂದೆಯೇ ಹಲವು ಬಾರಿ ಗೇಮ್ಸ್ ಸೆಂಟರ್ ನಿಗದಿತ ಅವಧಿಯಲ್ಲಿ ಮುಚ್ಚುವಂತೆ ವಾರ್ನಿಂಗ್ ಮಾಡಲಾಗಿತ್ತು. ಆದರೂ ಕೂಡ ನಿಯಮಿತ ಅವಧಿಯನ್ನು ಮೀರಿ ಯಾವುದೇ ಪರವಾನಿಗೆ ಪಡೆಯದೇ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲಾಗಿದೆ ಎಂದು ಆರೋಪಿಸಲಾಗಿದೆ.
ಹೊರ ಭಾಗದಿಂದ ಆಗಮಿಸುವ ಜನರು ಮದ್ಯ ಸೇವನೆ ಮಾಡಿ, ಸ್ಥಳದಲ್ಲಿ ಜಮಾಯಿಸುತ್ತಿರೋ ಕಾರಣದಿಂದಲೇ ಶಾಂಭವಿ ಎಂಪೈರ್, ಶಾಂಭವಿ ಹೆಬಿಟೇಜ್ ಹಾಗೂ ಗ್ರೀನ್ ಫಾರ್ಚೂನ್ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಶಾಂತಿ., ನೆಮ್ಮದಿಗೆ ಭಂಗವಾಗುತ್ತಿದೆ ಎಂದು ದೂರಲಾಗಿತ್ತು. ಸದ್ಯ ಮಣಿಪಾಲ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.