ಮಣಿಪಾಲ ಶಿವಳ್ಳಿ ಗ್ರಾಮದ ವಿದ್ಯಾರತ್ನನಗರದಲ್ಲಿ 'ಡಿಆರ್ಎನ್ಕೆ ಲ್ಯಾಬ್ ಕೆಫೆ' ಮೇಲೆ ಮಣಿಪಾಲ ಪೊಲೀಸರು ಮಧ್ಯರಾತ್ರಿ ಮಿಂಚಿನ ಕಾರ್ಯಾಚರಣೆಯ ನಡೆಸಿದ್ದಾರೆ. ಅಕ್ರಮವಾಗಿ ಹುಕ್ಕಾ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಮಣಿಪಾಲ ಠಾಣೆ ಪೊಲೀಸರು ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಕೆಫೆ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಕೆಫೆಯ ಎರಡು ಪ್ರತ್ಯೇಕ ಕ್ಯಾಬಿನ್ಗಳಲ್ಲಿ ಒಟ್ಟು ಎಂಟು ಮಂದಿ ಅಕ್ರಮವಾಗಿ ಹುಕ್ಕಾ ಸೇವಿಸುತ್ತಿರುವುದು ಪತ್ತೆಯಾಗಿದೆ. ಸ್ಥಳದಲ್ಲಿದ್ದ 3 ಹುಕ್ಕಾ ಸೆಟ್ಗಳು, ತಂಬಾಕು ಮಿಶ್ರಿತ ಹುಕ್ಕಾ ಫ್ಲೇವರ್ ಪ್ಯಾಕ್ಗಳು ಸೇರಿದಂತೆ ಸುಮಾರು 4,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಹುಕ್ಕಾ ಸೇವನೆಗಾಗಿ ಗ್ರಾಹಕರು ಆನ್ಲೈನ್ ಮೂಲಕ ಹಣ ಪಾವತಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರ ನಿರ್ದೇಶನದಂತೆ, ಮಣಿಪಾಲ ಠಾಣೆ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಎಎಸ್ಐ ವಾಮನ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ. ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಅಕ್ರಮ ಹುಕ್ಕಾ ಬಾರ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.