Kannada News Next

cricket

ಬೆಂಗಳೂರಿನ ಮೆಟ್ರೋದಲ್ಲಿ ಜಾವಗಲ್ ಶ್ರೀನಾಥ್ : ಮಾಜಿ ಕ್ರಿಕೆಟಿಗನ ಸರಳತೆಗೆ ಅಭಿಮಾನಿಗಳು ಫಿದಾ

1990ರ ದಶಕದಲ್ಲಿ ತಮ್ಮ ವೇಗದ ಬೌಲಿಂಗ್‌ ಮೂಲಕ ಎದುರಾಳಿಗೆ ಆಟಗಾರರಿಗೆ ಸಿಂಹಸ್ವಪ್ನರಾಗಿದ್ದ ಜಾವಗಲ್‌ ಶ್ರೀನಾಥ್‌ ಭಾರತ ಕ್ರಿಕೆಟ್‌ ತಂಡಕ್ಕೆ ನೂರಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
javagal srinath bengaluru metro viral photo fans praise simplicity

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್ ಹಾಗೂ ಕರ್ನಾಟಕದ ಕ್ರಿಕೆಟ್ ದಿಗ್ಗಜ ಜಾವಗಲ್ ಶ್ರೀನಾಥ್ ಸರಳತೆಯ ಮೂಲಕ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬೆಂಗಳೂರಲ್ಲಿ ನಮ್ಮ ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಸಂಚರಿಸುವ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಕ್ರಿಕೆಟ್‌ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಅವರು ಕೈಯಲ್ಲಿ ಟ್ರಾಲಿ ಬ್ಯಾಗ್‌ ಹಿಡಿದು ಬೆಂಗಳೂರಿನ ಮೆಟ್ರೋದಲ್ಲಿ ನಿಂತು ಪ್ರಯಾಣಿಸುತ್ತಿರುವ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್‌ ಆಗಿದೆ. ನೀಲಿ ಜೀನ್ಸ್‌ ಪ್ಯಾಂಟ್‌ ಜೊತೆಗೆ ನೀಲಿ ಬಣ್ಣದ ಶರ್ಟ್‌ ಧರಿಸಿರುವ ಶ್ರೀನಾಥ್‌ ಯಾವುದೇ ಬಾಡಿಗಾರ್ಡ್‌ ಜೊತೆಗೆ ಇರಿಸಿಕೊಳ್ಳದೇ ಸಾಮಾನ್ಯ ಪ್ರಯಾಣಿಕರಂತೆ ಸಂಚಾರ ನಡೆಸಿದ್ದಾರೆ.

1990ರ ದಶಕದಲ್ಲಿ ತಮ್ಮ ವೇಗದ ಬೌಲಿಂಗ್‌ ಮೂಲಕ ಎದುರಾಳಿಗೆ ಆಟಗಾರರಿಗೆ ಸಿಂಹಸ್ವಪ್ನರಾಗಿದ್ದ ಜಾವಗಲ್‌ ಶ್ರೀನಾಥ್‌ ಭಾರತ ಕ್ರಿಕೆಟ್‌ ತಂಡಕ್ಕೆ ನೂರಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಮೈದಾನದಲ್ಲಷ್ಟೇ ಅಲ್ಲಾ ಮೈದಾನದ ಹೊರಗೂ ಕೂಡ ತಮ್ಮ ಸರಳೆಯ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ.

javagal srinath bengaluru metro viral photo fans praise simplicity 1

ಸಾಮಾನ್ಯವಾಗಿ ಜಾವಗಲ್‌ ಶ್ರೀನಾಥ್‌ ಅವರು ಬೆಂಗಳೂರಿನಲ್ಲಿದ್ದಾಗ ನಮ್ಮ ಮೆಟ್ರೋ, ರಿಕ್ಷಾಗಳಲ್ಲಿಯೇ ಹೆಚ್ಚಾಗಿ ಸಂಚಾರ ಮಾಡುತ್ತಾರೆ. ಇದೀಗ ನಮ್ಮ ಮೆಟ್ರೋದಲ್ಲಿ ಶ್ರೀನಾಥ್‌ ಅವರು ಪ್ರಯಾಣಿಸುತ್ತಿರುವ ಪೋಟೋ ಹರಿದಾಡುತ್ತಿದ್ದಂತೆಯೇ ಹಲವರು ಶ್ರೀನಾಥ್‌ ಅವರ ಜೀವನ ಶೈಲಿಯನ್ನು ಕೊಂಡಾಡಿದ್ದಾರೆ. ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದರೂ ಕೂಡ ಶ್ರೀನಾಥ್‌ ಸಾಮಾನ್ಯ ನಾಗರೀಕರಂತೆ ಬದುಕುತ್ತಾ, ಸಾರ್ವಜನಿಕ ಸಾರಿಗೆ ಬಳಸುತ್ತಿರೋದು ಅನೇಕರ ಮೆಚ್ಚುಗೆಗೆ ಕಾರಣವಾಗಿದೆ.

ದ್ರಾವಿಡ್, ಪ್ರಸಾದ್‌ಗೂ ಶ್ರೀನಾಥ್‌ ಹೋಲಿಕೆ

ಕರ್ನಾಟಕದಲ್ಲಿನ ಖ್ಯಾತನಾಮ ಕ್ರಿಕೆಟಿಗರಾಗಿರುವ ಶ್ರೀನಾಥ್‌ ಅವರ ಜೊತೆಗೆ ರಾಹುಲ್‌ ದ್ರಾವಿಡ್‌ ಹಾಗೂ ವೆಂಕಟೇಶ್‌ ಪ್ರಸಾದ್‌ ಅವರನ್ನೂ ಕೂಡ ನೆಟ್ಟಿಗರು ನೆನಪಿಸಿಕೊಂಡಿದ್ದಾರೆ. ಖ್ಯಾತ ಕ್ರಿಕೆಟಿಗರಾಗಿದ್ದರೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯರಂತೆ ಕಾಣಿಸಿಕೊಳ್ಳುವ ಮೂಲಕ ಸರಳೆತಯನ್ನು ಸಾರುತ್ತಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.

ಜಾವಗಲ್‌ ಶ್ರೀನಾಥ್‌ ಅವರ ಸರಳೆಯ ಪೋಟೋ ವೈರಲ್‌ ಆಗ್ತಾ ಇರೋದು ಇದೇ ಮೊದಲೇನಲ್ಲ. ಈ ಹಿಂದೆ ಮೈಸೂರು ರೈಲ್ವೆ ನಿಲ್ದಾಣದಲ್ಲಿಯೂ ಬೆನ್ನಿಗೆ ಬ್ಯಾಗ್‌ ಹಾಕಿಕೊಂಡು ರೈಲಿಗಾಗಿ ಕಾಯುತ್ತಿದ್ದ ಶ್ರೀನಾಥ್‌ ಅವರ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿತ್ತು.

ಭಾರತ ಪರ 296 ಅಂತಾರಾಷ್ಟ್ರೀಯ ಪಂದ್ಯ

ಜಾವಗಲ್ ಶ್ರೀನಾಥ್ ಭಾರತ ಕ್ರಿಕೆಟ್‌ ತಂಡದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಅವರು ೊಟ್ಟು 67 ಟೆಸ್ಟ್ ಪಂದ್ಯಗಳು ಮತ್ತು 229 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಭಾರತದ ವೇಗದ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರವಾಗಿದ್ದ ಶ್ರೀನಾಥ್, ಹಲವು ವರ್ಷಗಳ ಕಾಲ ತಂಡದ ಪ್ರಮುಖ ಬೌಲರ್ ಆಗಿ ಸೇವೆ ಸಲ್ಲಿಸಿದ್ದರು. ಕ್ರಿಕೆಟ್‌ನಿಂತ ನಿವೃತ್ತರಾದ ಬಳಿಕ ಶ್ರೀನಾಥ್‌ ಅವರು ಐಸಿಸಿ ಮ್ಯಾಚ್‌ ರೆಫರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವೃತ್ತಿ ಕ್ರಿಕೆಟ್‌ನಿಂದ ದೂರವಾದ ಹಲವು ವರ್ಷಗಳ ನಂತರವೂ ಅವರು ತಮ್ಮ ಸೆರಳೆಯ ಮೂಲಕ ಗಮನ ಸೆಳೆಯುತ್ತಲೇ ಇದ್ದಾರೆ. ಇದೀಗ ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಕಾಣಿಸಿಕೊಂಡಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಕ್ರಿಕೆಟಿಗರಾಗಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದು, ಇದೀಗ ತಮ್ಮ ಸರಳೆಯ ಮೂಲಕ ಶ್ರೀನಾಥ್‌ ಇಂದಿನ ಯುವ ಜನತೆಗೆ ಮಾದರಿಯಾಗಿದ್ದಾರೆ.