ಬೆಂಗಳೂರು: ವಿದೇಶದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಕಳ್ಳಸಾಗಣೆ (Gold Smuggling) ಮಾಡಿದ ಆರೋಪದಲ್ಲಿ ಜೈಲು ಸೇರಿರುವ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವುಗಳು ಸಿಗುತ್ತಿವೆ. ಇದೀಗ ಪ್ರಕರಣದ ತನಿಖೆಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತೀವ್ರಗೊಳಿಸಿದ್ದು, ನಟಿ ರನ್ಯಾ ರಾವ್ ಅವರ ಆಪ್ತ ಗೆಳೆಯನೇ ನ್ಯಾಯಾಲಯದ ಮೆಟ್ಟಿಲೇರಿ ನೀಡಿದ ಹೇಳಿಕೆ ದೊಡ್ಡ ಶಾಕ್ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾ ರಾವ್ ಅವರ ಆಪ್ತ ಗೆಳೆಯ ನ್ಯಾಯಾಲಯಕ್ಕೆ ಸುದೀರ್ಘ ಮನವಿಯೊಂದನ್ನು ಸಲ್ಲಿಸಿದ್ದು, ನಟಿಗೆ ಚಿನ್ನ ನೀಡಿದ್ದನ್ನು ಒಪ್ಪಿಕೊಂಡಿದ್ದಾನೆ. ಆದರೆ ಭಾರತದ ಕಾನೂನಿನಿಂದ ಪಾರಾಗಲು ವಿಚಿತ್ರ ವಾದ ಮಂಡಿಸಿದ್ದಾನೆ.
"ನಾನು ರನ್ಯಾ ರಾವ್ ಅವರಿಗೆ ಚಿನ್ನದ ಬಿಸ್ಕತ್ತುಗಳನ್ನು ನೀಡಿದ್ದು ನಿಜ. ಆದರೆ, ನಾನು ಆ ಚಿನ್ನವನ್ನು ನೀಡಿದ್ದು ದುಬೈನಲ್ಲಿ, ಭಾರತದಲ್ಲಲ್ಲ. ಹೀಗಾಗಿ ನನಗೆ ದುಬೈನ ಕಾನೂನು ಮಾತ್ರ ಅನ್ವಯವಾಗಬೇಕೇ ಹೊರತು ಭಾರತದ್ದಲ್ಲ. ನಾನು ಭಾರತದ ಗಡಿಯೊಳಗೆ ಯಾವುದೇ ಅಕ್ರಮ ಎಸಗಿಲ್ಲ."
"ದುಬೈನಲ್ಲಿ ಪಡೆದ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಿದ್ದು ಸ್ವತಃ ರನ್ಯಾ ರಾವ್. ಈ ಅಪರಾಧಕ್ಕೆ ಭಾರತದ ಕಾನೂನಿನಡಿ ಆಕೆ ಮಾತ್ರ ಹೊಣೆಯಾಗಬೇಕೇ ಹೊರತು ನಾನಲ್ಲ. ಆದ್ದರಿಂದ ನನ್ನನ್ನು ಈ ಪ್ರಕರಣದಿಂದ ತಕ್ಷಣವೇ ಮುಕ್ತಗೊಳಿಸಬೇಕು," ಎಂದು ಮನವಿ ಮಾಡಿದ್ದಾನೆ.
ತಾನು ಪಾರಾಗುವ ನೆಪದಲ್ಲಿ ಸ್ವತಃ ಆಪ್ತ ಗೆಳೆಯನೇ ನೀಡಿದ ಈ ಹೇಳಿಕೆಗಳು ನಟಿ ರನ್ಯಾ ರಾವ್ ಅವರಿಗೆ ಇನ್ನಷ್ಟು ಕಾನೂನು ಸಂಕಷ್ಟವನ್ನು ತಂದೊಡ್ಡಿದೆ.
ಪ್ರಕರಣದ ಹಿನ್ನೆಲೆ: ₹100 ಕೋಟಿಗೂ ಅಧಿಕ ಮೌಲ್ಯದ ಸ್ಮಗ್ಲಿಂಗ್!
2025ರ ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ₹12.56 ಕೋಟಿ ಮೌಲ್ಯದ 14 ಕೆ.ಜಿ. ಚಿನ್ನ ತರುತ್ತಿದ್ದಾಗ ನಟಿ ರನ್ಯಾ ರಾವ್ ಅವರನ್ನು ಡಿಆರ್ಐ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ನಟಿಯ ಮನೆ ಮೇಲೆ ದಾಳಿ ನಡೆಸಿದಾಗ ₹2.06 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ₹2.67 ಕೋಟಿ ನಗದು ಪತ್ತೆಯಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ಸಹಚರರಾದ ಸಾಹಿಲ್ ಸಕಾರಿಯಾ ಜೈನ್, ಭರತ್ ಕುಮಾರ್ ಜೈನ್ ಮತ್ತು ತರುಣ್ ಕೊಂಡರಾಜು ಅವರನ್ನು ಬಂಧಿಸಲಾಗಿತ್ತು.
ಡಿಆರ್ಐ ಮತ್ತು ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸಿದಾಗ, ಆರೋಪಿಗಳು ಒಂದು ವರ್ಷದ ಅವಧಿಯಲ್ಲಿ ಸುಮಾರು ₹102.55 ಕೋಟಿ ಮೌಲ್ಯದ 127 ಕೆ.ಜಿ. ಚಿನ್ನ ಕಳ್ಳಸಾಗಣೆ ಮಾಡಿರುವುದು ಬಯಲಾಗಿತ್ತು. ಪ್ರಸ್ತುತ ನಾಲ್ವರು ಆರೋಪಿಗಳ ವಿರುದ್ಧ ಪಿಎಂಎಲ್ಎ (PMLA) ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ವಿಚಾರಣೆ ಭರದಿಂದ ಸಾಗಿದೆ.