ನಿವೃತ್ತ ಸರ್ಕಾರಿ ಬಸ್ ಚಾಲಕರೊಬ್ಬರ ಮನೆಯಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಲ್ಲು ಗಣಿ ಉದ್ಯಮದ ಬೃಹತ್ ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ದಾಳಿಯಲ್ಲಿ ಬರೋಬ್ಬರಿ 15 ಕೆಜಿ ಚಿನ್ನ ಹಾಗೂ 20 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಪಶ್ಚಿಮ ಬಂಗಾಳದ ಪ್ರಭಾವಿ ಕಲ್ಲು ಗಣಿ ಉದ್ಯಮಿ ತುಳು ಮೊಂಡಲ್ ಎಂಬುವವರ ಭಾಮೈದನಾಗಿರುವ ಮಿನಾರ್ ಮೊಂಡಲ್ ಎಂಬ ನಿವೃತ್ತ ಬಸ್ ಚಾಲಕನ ಮನೆ ಮೇಲೆ ಪೊಲೀಸರು ಹಠಾತ್ ದಾಳಿ ನಡೆಸಿದ್ದರು. ಗಣಿ ಉದ್ಯಮದಲ್ಲಿ ಕೋಟ್ಯಂತರ ರೂಪಾಯಿ ಹಣಕಾಸಿನ ಅಕ್ರಮ ನಡೆದಿರುವ ಸುಳಿವು ಬೆನ್ನತ್ತಿದ ಅಧಿಕಾರಿಗಳಿಗೆ, ಈ ನಿವೃತ್ತ ಚಾಲಕನ ಮನೆಯಲ್ಲಿ ತಟ್ಟೆಯಲ್ಲಿಟ್ಟಂತೆ ಸಿಕ್ಕಿದ್ದು ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಟ್ಟುಗಳು.
ಪೊಲೀಸರು ದಾಳಿ ನಡೆಸಿದಾಗ ಸಿಕ್ಕ ನಗದಿನ ಪ್ರಮಾಣ ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ. ವಶಪಡಿಸಿಕೊಂಡ ಹಣ ಎಣಿಕೆ ಮಾಡಲು ತಕ್ಷಣವೇ 5 ನಗದು ಎಣಿಕೆ ಯಂತ್ರಗಳನ್ನು (Cash Counting Machines) ತರಿಸಬೇಕಾಯಿತು. ಬರೋಬ್ಬರಿ 20 ಕೋಟಿ ರೂ. ನಗದನ್ನು ಸಾಗಿಸಲು ಸುಮಾರು 35 ಚೀಲಗಳನ್ನು ಬಳಸಲಾಗಿದೆ. ಈ ಹಣ ಹಾಗೂ ಚಿನ್ನವನ್ನು ಸುರಕ್ಷಿತವಾಗಿ ಸಂಗ್ರಹಿಸಿಡಲು 5 ದೊಡ್ಡ ಟಿನ್ ಟ್ರಂಕ್ಗಳನ್ನು ತರಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೋಲಿಸ್ ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದ ಮೂರು ಜಿಲ್ಲೆಗಳಾದ್ಯಂತ ಇರುವ ಆರು ಕಲ್ಲು ಕೈಗಾರಿಕಾ ಕ್ಲಸ್ಟರ್ಗಳ ಪ್ರವೇಶ ದ್ವಾರಗಳಲ್ಲಿ ಚಂದಾ/ಸುಂಕ ಸಂಗ್ರಹಿಸುವ ಜವಾಬ್ದಾರಿಯನ್ನು ತುಳು ಮೊಂಡಲ್ ಅವರ ಏಜೆನ್ಸಿಗೆ ನೀಡಲಾಗಿತ್ತು.
ಈ ಏಜೆನ್ಸಿಯು ಪ್ರತಿ ತಿಂಗಳು ಸುಮಾರು 83 ಕೋಟಿ ರೂ. ಚಂದಾ ಸಂಗ್ರಹಿಸುವ ನಿರೀಕ್ಷೆಯಿತ್ತಾದರೂ, ಸರ್ಕಾರಿ ಖಜಾನೆಗೆ ಕೇವಲ 2 ರಿಂದ 5 ಕೋಟಿ ರೂ. ಮಾತ್ರ ಜಮಾ ಮಾಡುತ್ತಿತ್ತು! ಉಳಿದ ಭಾರಿ ಮೊತ್ತದ ಸಾರ್ವಜನಿಕ ಹಣವನ್ನು ಅಕ್ರಮವಾಗಿ ಲೂಟಿ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ನಲ್ಲಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ವಿಪಕ್ಷ ನಾಯಕ ಸುವೇಂಧು ಅಧಿಕಾರಿ:
“ಪೊಲೀಸರ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಅಕ್ರಮ ಆಸ್ತಿ ಹೊರಬಂದಿದೆ. ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಇರಬೇಕು. ಸಾರ್ವಜನಿಕ ಸಂಪನ್ಮೂಲಗಳನ್ನು ಲೂಟಿ ಮಾಡಿ ಆಸ್ತಿ ಗಳಿಸಿದ ಯಾವುದೇ ವ್ಯಕ್ತಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ಮಾಫಿಯಾ ಸಿಂಡಿಕೇಟ್ಗಳ ವಿರುದ್ಧದ ಈ ಕಾರ್ಯಾಚರಣೆ ಹೀಗೆಯೇ ಮುಂದುವರಿಯಬೇಕು,” ಎಂದು ಆಗ್ರಹಿಸಿದ್ದಾರೆ.
ಪ್ರಸ್ತುತ ಪೊಲೀಸರು ವಶಪಡಿಸಿಕೊಂಡಿರುವ ಚಿನ್ನ ಮತ್ತು ನಗದಿನ ನೈಜ ಮೂಲವನ್ನು ಶೋಧಿಸುತ್ತಿದ್ದು, ಈ ಗಣಿ ಮಾಫಿಯಾದ ಹಿಂದೆ ಇರುವ ಇತರ ದೊಡ್ಡ ಕೈಗಳ ಕುರಿತು ತೀವ್ರ ತನಿಖೆ ನಡೆಸುತ್ತಿದ್ದಾರೆ.
