ದೇಶಾದ್ಯಂತ 5.8 ಕೋಟಿ ಬಿಪಿಎಲ್​ ಕಾರ್ಡ್​ಗಳು ರದ್ದು : ಅನರ್ಹರ ಆಟಕ್ಕೆ ಕೇಂದ್ರದ ಅಂಕುಶ

ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ನಕಲಿ ಬಿಪಿಎಲ್​ ಕಾರ್ಡ್​ ಫಲಾನುಭವಿಗಳನ್ನು ಪತ್ತೆ ಮಾಡಿ ಅವರ ಕಾರ್ಡ್​ಗಳನ್ನು ರದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಕೂಡ ಮಹತ್ವದ ಕ್ರಮ ಕೈಗೊಂಡಿದೆ. ರೇಷನ್​ ಕಾರ್ಡ್ ಡಿಜಿಟಲೀಕರಣ ವ್ಯವಸ್ಥೆ ಮೂಲಕ ಬರೋಬ್ಬರಿ 5.8 ಕೋಟಿ ಅಕ್ರಮ ಬಿಪಿಎಲ್​ ಕಾರ್ಡ್​ಗಳನ್ನು ದೇಶವ್ಯಾಪಿ ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈ ಸಂಬಂಧ ಮಾಹಿತಿ ನೀಡಿದ ಕೇಂದ್ರ ಆಹಾರ ಸಚಿವಾಲಯವು, ಮಾಸಿಕವಾಗಿ 80.6 ಕೋಟಿ ಜನರಿಗೆ ಪಡಿತರ ವ್ಯವಸ್ಥೆ ಮೂಲಕ ರೇಷನ್​ ನೀಡಲಾಗುತ್ತಿದೆ. ಆದರೆ ನಕಲಿ ಕಾರ್ಡ್​ದಾರರಿಂದ ಜಾಗತಿಕ ಆಹಾರ ಭದ್ರತಾ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನ ಸಾಧ್ಯವಿಲ್ಲವಾದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಇನ್ನು ರೇಷನ್​ ಪಡೆಯಲು ನ್ಯಾಯಬೆಲೆ ಅಂಗಡಿಗಳಿಗೆ ಬಂದ ಸಂದರ್ಭದಲ್ಲಿ ಕಾರ್ಡ್​ಗಳನ್ನು ರದ್ದುಗೊಳಿಸಲಾಗುತ್ತಿದೆ. ಆಧಾರ್​ ವೆರಿಫಿಕೇಷನ್​ ಹಾಗೂ ಇಕೆವೈಸಿ ವಿಧಾನಗಳನ್ನು ಬಳಕೆ ಮಾಡಿ ಅನರ್ಹರನ್ನು ಬಿಪಿಎಲ್​​ ಗುಂಪಿನಿಂದ ಹೊರತಳ್ಳಲಾಗುತ್ತಿದೆ. ಪಡಿತರ ಅಂಗಡಿಗಳಲ್ಲಿ ಇಪಿಒಎಸ್​ ಯಂತ್ರಗಳನ್ನು ಅಳವಡಿಕೆ ಮಾಡಲಾಗಿದ್ದು ಈ ಯಂತ್ರದ ಮೂಲಕವೇ ಅನರ್ಹ ಬಿಪಿಎಲ್​ ಫಲಾನುಭವಿಗಳನ್ನು ಪತ್ತೆ ಮಾಡಲಾಗುತ್ತಿದೆ. ಈ ಮೂಲಕ ಪಡಿತರ ಸೋರಿಕೆಗೆ ಬ್ರೇಕ್​ ಹಾಕುವ ದಿಟ್ಟ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಇದನ್ನೂ ಓದಿ: ನರೇಗಾ ಕ್ರಿಯಾ ಯೋಜನೆಗೆ ಅರ್ಜಿ ಸಲ್ಲಿಸಲು ನಾಳೆ ಕೊನೆ ದಿನ

ಈ ಹಿಂದೆ ರಾಜ್ಯದಲ್ಲಿಯೂ ಬಿಪಿಎಲ್​ ಕಾರ್ಡ್​ನ ಮಾರ್ಗಸೂಚಿಗಳಲ್ಲಿ ಬದಲಾವಣೆ ತರಲಾಗಿತ್ತು. ಪರಿಣಾಮ ರಾಜ್ಯದಲ್ಲಿಯೂ 5 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಬಿಪಿಎಲ್​ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಬಹುತೇಕರು ಬಿಪಿಎಲ್​ ಕಾರ್ಡ್​ನಿಂದ ಸಿಗುವ ಪಡಿತರಕ್ಕಿಂತ ಹೆಚ್ಚಾಗಿ ಬಿಪಿಎಲ್​ ಫಲಾನುಭವಿಗಳಿಗೆ ಇರುವ ವೈದ್ಯಕೀಯ ಸೇವೆ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಈ ಕಾರ್ಡ್​ಗಳನ್ನು ಹೊಂದಿದ್ದರು ಎಂದು ತಿಳಿದುಬಂದಿತ್ತು. ಆದರೆ ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ನಕಲಿ ಬಿಪಿಎಲ್​ ಫಲಾನುಭವಿಗಳ ಮೇಲೆ ಕಣ್ಣಿಟ್ಟಿದ್ದು ಶೀಘ್ರದಲ್ಲೇ ಮತ್ತಷ್ಟು ನಕಲಿ ಬಿಪಿಎಲ್​ದಾರರ ಕಾರ್ಡ್​ಗೆ ಕೊಕ್ಕೆ ಬೀಳಲಿದೆ.

Exit mobile version