ದೇಶಾದ್ಯಂತ ಸಂಚಲನ ಮೂಡಿಸಿರುವ ಅಯೋಧ್ಯೆ ರಾಮಮಂದಿರ ಹುಂಡಿ ಕಳುವು ಪ್ರಕರಣದಲ್ಲಿ , ದಿನಕ್ಕೊಂದು ಟ್ವಿಸ್ಟ್ ಎದುರಾಗುತ್ತಲೇ ಇದೆ. ಆದರೆ ಈ ಬೆನ್ನಲ್ಲೆ ರಾಮಮಂದಿರದಲ್ಲಿ ಇಂತಹ ಕಳ್ಳತನದ ಘಟನೆಗಳು ಮರುಕಳಿಸದಂತೆ ತಡೆಯುವ ಉದ್ದೇಶದಿಂದಾಗಿ ಅಯೋಧ್ಯೆ ರಾಮಮಂದಿರದಲ್ಲಿ ಹುಂಡಿ ಎಣಿಕೆ ಮಾಡುವ ಸಿಬ್ಬಂದಿಗೆ ಹೊಸ ಡ್ರೆಸ್ ಕೋಡ್ ಜಾರಿಗೆ ತರಲಾಗಿದೆ.
ಹೌದು..! ಸಿ.ಸಿ ಕ್ಯಾಮರಾಗಳ ಕಣ್ತಪ್ಪಿಸಿ ಹಣದೋಚಿದ್ದ ರಾಮಮಂದಿರ ಸಿಬ್ಬಂದಿಯ ನಡೆಯಿಂದ ಭಕ್ತರೆದುರು ದೇವಾಲಯದ ಟ್ರಸ್ಟ್ ತಲೆತಗ್ಗಿಸುವಂತಾಗಿದೆ. ಅಲ್ಲದೇ ವಿರೋಧ ಪಕ್ಷಗಳಿಗೂ ಬಿಜೆಪಿ ಸುಲಭದ ತುತ್ತಾಗಿ ಪರಿಣಮಿಸಿದೆ. ಈ ಎಲ್ಲಾ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆಯ ರಾಮಮಂದಿರದಲ್ಲಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗುವ ಸಿಬ್ಬಂದಿ ಜೇಬಿಲ್ಲದ ದಿರಿಸು ಧರಿಸುವುದು ಕಡ್ಡಾಯ ಎಂದು ಆದೇಶ ಹೊರಡಿಸಲಾಗಿದೆ.
ಈ ಮೊದಲು ದೇಗುಲದ ಸ್ವಚ್ಛತಾ ಸಿಬ್ಬಂದಿಯೇ ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗುತ್ತಿದ್ದರು. ಆದರೆ ಹುಂಡಿ ಕಳ್ಳತನ ಪ್ರಕರಣದ ಬಳಿಕ ಸ್ವಚ್ಛತಾ ಸಿಬ್ಬಂದಿಯನ್ನು ಕೇವಲ ಸ್ವಚ್ಛತಾ ಕೆಲಸಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಯು ಜೇಬಿಲ್ಲದ ದಿರಿಸು ಧರಿಸುವುದು ಮಾತ್ರವಲ್ಲದೇ, ಪೊಲೀಸರಿಂದ ನಡವಳಿಕೆ ಪ್ರಮಾಣಪತ್ರ ಸಲ್ಲಿಕೆ ಮಾಡುವುದು ಕೂಡ ಕಡ್ಡಾಯ ಎಂದು ದೇಗುಲದ ಟ್ರಸ್ಟ್ ಘೋಷಣೆ ಮಾಡಿದೆ.
ಇನ್ನು ದೇಗುಲದ ಟ್ರಸ್ಟ್ನಿಂದ ಈ ರೀತಿಯ ಕಠಿಣ ನಿಯಮಾವಳಿಗಳು ಜಾರಿಗೆ ಬರುತ್ತಿದ್ದಂತೆಯೇ, ಅಯೋಧ್ಯೆ ರಾಮಮಂದಿರದ 23 ಮಂದಿ ಸಿಬ್ಬಂದಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಕೆಲಸದ ಒತ್ತಡ ಹೆಚ್ಚಾಗುತ್ತಿರುವುದರಿಂದ ರಾಜೀನಾಮೆ ನೀಡುತ್ತಿದ್ದೇವೆ ಎಂದು ಇವರೆಲ್ಲ ಕಾರಣ ನೀಡಿದ್ದಾರೆ ಎನ್ನಲಾಗಿದೆ. ಆದರೆ ಡ್ರೆಸ್ಕೋಡ್ ನಿಯಮ ಜಾರಿ ಬೆನ್ನಲ್ಲೇ ಸಾಮೂಹಿಕ ರಾಜೀನಾಮೆ ಸಲ್ಲಿಕೆಯಾಗಿರೋದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ.
New dress code for donation box counting at the Ayodhya Ram Mandir 23 people resigned as soon as the rule was implemented
