ರಾಜ್ಯದಲ್ಲಿ ಕ್ಷೀಣಿಸಿದ ಮುಂಗಾರು ಅಬ್ಬರ.. ಅನ್ನದಾತರಲ್ಲಿ ಹೆಚ್ಚಿದ ಆತಂಕ

ಪೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನ ಹೆಚ್ಚಳದ ಪರಿಣಾಮವಾಗಿ ಜೂನ್ ಮಧ್ಯಭಾಗದಲ್ಲೇ ಮಳೆಯ ಪ್ರಭಾವ ಗಣನೀಯವಾಗಿ ಕುಸಿದಿದೆ.

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆಯ ಆರಂಭ ಆಶಾದಾಯಕವಾಗಿದ್ದರೂ, ಪೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನ ಹೆಚ್ಚಳದ ಪರಿಣಾಮವಾಗಿ ಜೂನ್ ಮಧ್ಯಭಾಗದಲ್ಲೇ ಮಳೆಯ ಪ್ರಭಾವ ಗಣನೀಯವಾಗಿ ಕುಸಿದಿದೆ. ಸಮುದ್ರ ಮಟ್ಟದ ಹವಾಮಾನ ವೈಪರೀತ್ಯಗಳಿಂದಾಗಿ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲೂ ಸಾಧಾರಣ ಮಳೆಯಷ್ಟೇ ದಾಖಲಾಗುತ್ತಿದ್ದು, ಒಣ ಹವೆ ಮೇಲುಗೈ ಸಾಧಿಸುತ್ತಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಉತ್ತರ ಕರ್ನಾಟಕದ ಕೇವಲ ನಾಲ್ಕು ಜಿಲ್ಲೆಗಳಿಗೆ ಮಾತ್ರ ಒಂದು ದಿನದ ಮಟ್ಟಿಗೆ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹಾವೇರಿ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಜೂನ್ 20ರ ಆಸುಪಾಸಿನಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಧಾರಾಕಾರ ಮಳೆಯಾಗುವ ನಿರೀಕ್ಷೆಯಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ ದುರ್ಬಲಗೊಂಡ ನೈಋತ್ಯ ಮುಂಗಾರು.. ಬರಗಾಲ ಎದುರಿಸಲು ಸಜ್ಜಾಗಿ ಎಂದ ಸಿಎಂ ಡಿ.ಕೆ ಶಿವಕುಮಾರ್

ರಾಜಧಾನಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಮೈಸೂರು, ಹಾಸನ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಕಲಬುರಗಿಯಂತಹ ಒಳನಾಡು ಜಿಲ್ಲೆಗಳಲ್ಲಿ ಕೇವಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಯಾವುದೇ ಭಾರೀ ಮಳೆಯ ಮುನ್ಸೂಚನೆ ಇರುವುದಿಲ್ಲ.

ಜೂನ್ ಮೊದಲ ವಾರದಲ್ಲೇ ಮುಂಗಾರು ನಂಬಿ ಬಿತ್ತನೆ ಕಾರ್ಯ ಪೂರ್ಣಗೊಳಿಸಿರುವ ಕೃಷಿಕರು ಈಗ ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ತೇವಾಂಶದ ಕೊರತೆ ಮತ್ತು ಹೆಚ್ಚುತ್ತಿರುವ ಬಿಸಿಲಿನಿಂದಾಗಿ ಮೊಳಕೆಯೊಡೆದ ಎಳೆಯ ಪೈರುಗಳು ಹೊಲದಲ್ಲೇ ಒಣಗಲು ಆರಂಭಿಸಿವೆ. ಮುಂಬರುವ ಒಂದು ವಾರದಲ್ಲಿ ವ್ಯಾಪಕ ಮಳೆಯಾಗದಿದ್ದರೆ ಇಡೀ ಮುಂಗಾರು ಹಂಗಾಮಿನ ಬೆಳೆ ಕೈಕೊಡುವ ಆತಂಕ ಎದುರಾಗಿದೆ.

Exit mobile version