ವಯಸ್ಸಾದಂತೆ ಹಲವರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನೋವು ಅತಿ ಸಾಮಾನ್ಯವಾದ ಆರೋಗ್ಯ ಸಮಸ್ಯೆಯಾಗಿದೆ. ಅದರಲ್ಲೂ ಸಂಧಿವಾತ ಬಹಳಷ್ಟು ಜನರ ಜೀವನ ನೋವಿನಿಂದ ಕೂಡಿರುವಂತೆ ಮಾಡಿದೆ. ಗಂಟುಗಳಲ್ಲಿ ಅತಿಯಾದ ನೋವು ಸಹಜ ಜೀವನ ನಡೆಸಲು ಬಹಳ ಅಡ್ಡಿಪಡಿಸುತ್ತದೆ. ಅಸಹನೀಯ ನೋವಿನಿಂದ ವ್ಯಕ್ತಿಯು ತನ್ನ ಸುಂದರ, ಸಂತೋಷಮಯ ಜೀವನವನ್ನು ಕಳೆದುಕೊಳ್ಳುವಂತಾಗಿದೆ. ಈ ಸಂಧಿವಾತಕ್ಕೆ ಹಲವಾರು ಕಾರಣಗಳಿವೆ. ಕೆಲವೊಮ್ಮೆ ನಿರಂತರ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೂ ನೋವು ಕಡಿಮೆಯಾಗುವುದು ದೂರದ ಮಾತಾಗಿದೆ. ಸಂಧಿವಾತಕ್ಕೆ ದೇಹದಲ್ಲಿನ ಅತಿಯಾದ ಉಷ್ಣತೆ (ಶಾಖ) ಪ್ರಮುಖ ಕಾರಣವಾಗಿದೆ. ಹಾಗಾಗಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯವಾಗಿದೆ. ಪ್ರತಿದಿನ ಸೇವಿಸುವ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಸಂಧಿವಾತಕ್ಕೆ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಯಾವ ಆಹಾರಗಳನ್ನು ನಿತ್ಯದ ಊಟದಲ್ಲಿ ಸೇರಿಸಿಕೊಳ್ಳಬೇಕು ಎಂದು ನೋಡೋಣ.
ಪಪ್ಪಾಯಿ ಹಣ್ಣು
ಪಪ್ಪಾಯಿಯಲ್ಲಿ ಪಪೈನ್ ಎಂಬ ಉರಿಯೂತ ನಿವಾರಕ ಸಂಯುಕ್ತವಿರುತ್ತದೆ. ಇದು ಕೀಲು ನೋವು (ಸಂಧಿವಾತ) ಮತ್ತು ಸ್ನಾಯುವಿನ ಸೆಳೆತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಂಧಿವಾತದಿಂದ ಬಳಲುತ್ತಿರುವವರು ನಿಯಮಿತವಾಗಿ ಪಪ್ಪಾಯಿ ಹಣ್ಣನ್ನು ಸೇವಿಸಬೇಕು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಹಣ್ಣನ್ನು ತಿನ್ನುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಬಿಳಿ ಎಳ್ಳು
ಬಿಳಿ ಎಳ್ಳು ತಾಮ್ರ ಮತ್ತು ಕಾಲ್ಸಿಯಂ ಅಂಶದಿಂದ ಕೂಡಿರುತ್ತದೆ. ಇದು ಸಂಧಿವಾತದ ನೋವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮೂಳೆಗಳು ಕೂಡಾ ಬಲಿಷ್ಠವಾಗಿರುತ್ತವೆ.
ಮೆಂತ್ಯ
ಮೆಂತ್ಯದಲ್ಲಿರುವ ಲಿನೋಲೆನಿಕ್ ಮತ್ತು ಲಿನೋಲಿಕ್ ಆಮ್ಲಗಳು ಕೀಲು ನೋವನ್ನು ಕಡಿಮೆ ಮಾಡುತ್ತವೆ. ಮೆಂತ್ಯ ದೇಹಕ್ಕೆ ತಂಪನ್ನು ಸಹ ನೀಡುತ್ತದೆ. ಒಂದು ಕಪ್ ನೀರಿಗೆ ಒಂದು ಚಮಚ ಮೆಂತ್ಯ ಕಾಳುಗಳನ್ನು ಹಾಕಿ ಕುದಿಸಿ. ಬಿಸಿ ಆರಿದ ನಂತರ ಸೋಸಿ ಆ ನೀರನ್ನು ಕುಡಿಯಿರಿ.
ನೆನೆಸಿದ ಅಂಜೂರ
ಅಂಜೂರಗಳಲ್ಲಿ ಫೈಟೊಕೆಮಿಕಲ್ಗಳು, ಪಾಲಿಫಿನಾಲ್ಗಳು ಮತ್ತು ಫ್ಲೇವನಾಯ್ಡ್ಗಳು ಇರುತ್ತವೆ. ಇವು ಈಗಾಗಲೇ ನಿಮ್ಮನ್ನು ಕಾಡುತ್ತಿರುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ನೋವು ಹೆಚ್ಚಾಗದಂತೆ ತಡೆಯುತ್ತದೆ. ಒಣಗಿದ ಅಂಜೂರ ವರ್ಷಪೂರ್ತಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಅವುಗಳನ್ನು ತಂದು ನೀರಿನಲ್ಲಿ ನೆನೆಸಿ ತಿನ್ನಿ.
ಚಿಯಾ ಬೀಜಗಳು
ಚಿಯಾ ಬೀಜಗಳು ಹೆಚ್ಚಿನ ಪ್ರಮಾಣದ ಆಲ್ಫಾ ಲಿನೋಲೆನಿಕ್ ಆಮ್ಲದಿಂದ ಕೂಡಿರುತ್ತವೆ. ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿರುವವರಿಗೆ ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಪ್ರತಿದಿನ ಕುಡಿಯಲು ಕೊಡುವುದರಿಂದ ನೋವು ಬಹಳ ಬೇಗನೆ ಕಡಿಮೆಯಾಗುತ್ತದೆ.