ಬೆಂಗಳೂರು : ರಾಜಧಾನಿಯ ಸಾರಿಗೆ ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಭೀಕರ ಆತ್ಮಹತ್ಯೆ ಪ್ರಕರಣ ಸಂಭವಿಸಿದೆ. ಹೊಸದಾಗಿ ಆರಂಭಗೊಂಡಿರುವ ಹಳದಿ ಮಾರ್ಗದ ಹುಸ್ಕೂರು ರಸ್ತೆ ನಿಲ್ದಾಣದಲ್ಲಿ ಸೋಮವಾರ ಸಂಜೆ ರೈಲು ಬರುತ್ತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಹಳಿಗೆ ಜಿಗಿದು ಜೀವ ಕಳೆದುಕೊಂಡಿದ್ದಾರೆ.
ಮೃತರನ್ನು ಮೂಲತಃ ರಾಯಚೂರು ಜಿಲ್ಲೆಯವರಾದ 37 ವರ್ಷದ ಪತ್ರಕರ್ತ ರಾಜೇಶ್ ಹಿರೇಮಠ (Rajesh Hiremat ) ಎಂದು ಗುರುತಿಸಲಾಗಿದೆ. ಅವರು ಈ ಹಿಂದೆ ಖಾಸಗಿ ಡಿಜಿಟಲ್ ಸುದ್ದಿ ವಾಹಿನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಕಳೆದ ಒಂದು ವರ್ಷದಿಂದ ಸೂಕ್ತ ಉದ್ಯೋಗವಿಲ್ಲದೆ ರಾಜೇಶ್ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು. ಇದೇ ಕಾರಣದಿಂದಾಗಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅವರು ಈ ಹತಾಶೆಯ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಸಂಜೆ ಸುಮಾರು ಆರು ಗಂಟೆಯ ಸಮಯದಲ್ಲಿ ಪ್ಲಾಟ್ಫಾರ್ಮ್ಗೆ ರೈಲು ಆಗಮಿಸುತ್ತಿದ್ದಂತೆ ಅವರು ಹಳಿಗೆ ಜಿಗಿದಿದ್ದು, ಲೋಕೋ ಪೈಲಟ್ ತಕ್ಷಣ ತುರ್ತು ಬ್ರೇಕ್ ಹಾಕಿದರೂ ದುರಂತ ತಪ್ಪಿಸಲು ಸಾಧ್ಯವಾಗಲಿಲ್ಲ. ಈ ಆಕಸ್ಮಿಕ ಘಟನೆಯಿಂದಾಗಿ ಮೆಟ್ರೋ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ತಕ್ಷಣವೇ ಆ ಭಾಗದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಮೃತದೇಹದ ತೆರವು ಕಾರ್ಯಾಚರಣೆ ನಡೆಸಿದರು. ಇದರಿಂದಾಗಿ ಹಳದಿ ಮಾರ್ಗದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮೆಟ್ರೋ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರು ಪರ್ಯಾಯ ವ್ಯವಸ್ಥೆಗಳನ್ನು ಅವಲಂಬಿಸಬೇಕಾಯಿತು.
ಮೆಟ್ರೋ ಅಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಪ್ರಯಾಣಿಕರಿಗೆ ನಿರಂತರವಾಗಿ ಮಾಹಿತಿ ನೀಡಿದರು. ಅಲ್ಲದೆ, ತೊಂದರೆಗೊಳಗಾದ ಪ್ರಯಾಣಿಕರಿಗೆ ಟಿಕೆಟ್ ವೆಚ್ಚವನ್ನು ಆನ್ಲೈನ್ ಮೂಲಕ ಮರುಪಾವತಿ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಕ್ರಮ ಕೈಗೊಂಡಿದೆ.
ರಾತ್ರಿ ಎಂಟು ಗಂಟೆಯ ವೇಳೆಗೆ ಹಳಿಗಳ ಸುರಕ್ಷತಾ ಪರಿಶೀಲನೆ ಮುಗಿದ ನಂತರ ರೈಲು ಸಂಚಾರವನ್ನು ಪುನಃ ಸಹಜ ಸ್ಥಿತಿಗೆ ತರಲಾಯಿತು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.
Bengaluru Metro Journalist Rajesh Hiremat Suicide Train Disrupted Kannada News
