ಮಂಗಳೂರು : ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಗೃಹಲಕ್ಷ್ಮೀ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ನಡೆದಿರೋದು ಬೆಳಕಿಗೆ ಬಂದಿದೆ. ಅದ್ರಲ್ಲೂ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಬರೋಬ್ಬರಿ 3,477 ಮೃತರ ಖಾತೆಗೆ 3.34 ಕೋಟಿ ರೂಪಾಯಿ ಗೃಹಲಕ್ಷ್ಮೀ ಹಣ ಜಮೆ ಆಗಿದೆ. ಆದರೆ ಇದುವರೆಗೆ ಸರಕಾರಕ್ಕೆ ಕೇವಲ 95.32 ಲಕ್ಷ ರೂಪಾಯಿ ವಾಪಾಸ್ ಬಂದಿದೆ.
ಗೃಹಲಕ್ಷ್ಮೀ ಯೋಜನೆಯ ಮೂಲಕ ಕುಟುಂಬದ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ಹಣ ಜಮೆ ಆಗ್ತಿತ್ತು. ಆದರೆ ಮನೆಯ ಯಜಮಾನಿಯರು ಮೃತಪಟ್ಟಿದ್ದರೂ ಕೂಡ ಸರಕಾರಕ್ಕೆ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಮೃತರ ಖಾತೆಗೆಗಳಿಗೆ ಸಾವಿರಾರು ರೂಪಾಯಿ ಜಮೆ ಆಗಿದೆ. ಇದೇ ಕಾರಣದಿಂದಲೇ ಇದೀಗ ಸರಕಾರ ಮೃತ ಫಲಾನುಭವಿಗಳ ಖಾತೆಗೆ ಜಮೆ ಆಗಿರುವ ಹಣವನ್ನು ವಾಪಾಸ್ ಪಡೆಯಲು ಮುಂದಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ 11,184 ಮಂದಿ ಫಲಾನುಭವಿಗಳಿದ್ದು, ಈ ಪೈಕಿ 3,477 ಮಂದಿ ಮೃತ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಹಣ ಜಮೆ ಆಗಿದೆ. ಈ ಪೈಕಿ ಕೇವಲ 951 ಮೃತ ಫಲಾನುಭವಿಗಳ ಖಾತೆಯಿಂದ 95.32 ಲಕ್ಷ ರೂಪಾಯಿ ಹಣವನ್ನು ಮರು ಪಾವತಿ ಮಾಡಲಾಗಿದೆ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಪರಿಶೀಲನೆಗೆ ಮುಂದಾಗಿದೆ. ಮೃತರ ಖಾತೆಗೆ ಜಮೆ ಆಗಿರುವ ಪೈಕಿ 51.50 ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್ಗಳಲ್ಲಿ ಫ್ರೀಜ್ ಮಾಡಲಾಗಿದೆ.
ಸದ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿ ಮೃತಪಟ್ಟಿರುವವರ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಮಾಡುತ್ತಿದೆ. ತಳಮಟ್ಟದಿಂದಲೇ ಮಾಹಿತಿಯನ್ನು ಕಲೆಹಾಕಿ ಮುಂದಿನ ತಿಂಗಳಿನಿಂದ ಗೃಹಲಕ್ಷ್ಮೀ ಹಣ ಮೃತರ ಖಾತೆಗೆ ಜಮೆ ಆಗುವುದನ್ನು ತಡೆಯಲು ಬೇಕಾದ ಎಲ್ಲಾ ಕಸರತ್ತು ನಡೆಸುತ್ತಿದೆ. ಗ್ರಾಮೀಣ ಭಾಗದಲ್ಲಿ ಮರಣ ಪ್ರಮಾಣ ಪತ್ರ ಪಡೆಯಲು ನಿರ್ಲಕ್ಷ್ಯ ಮತ್ತು ಇ -ಜನ್ಮ ಪೋರ್ಟಲ್ನಲ್ಲಿ ಮರಣದ ಮಾಹಿತಿ ದಾಖಲಾಗದೇ ಇರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಗೃಹಲಕ್ಷ್ಮೀ ಹಣ ಅನರ್ಹರು ಹಾಗೂ ಮೃತರ ಖಾತೆಗೆ ಜಮೆ ಆಗುವುದನ್ನು ತಪ್ಪಿಸುವ ಸಲುವಾಗಿ ಇಲಾಖೆಯ ಅಧಿಕಾರಿಗಳು ಲೀಡ್ ಬ್ಯಾಂಕ್ನಿಂದ ಮಾಹಿತಿಯನ್ನು ಪಡೆದು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಹಕಾರದೊಂದಿಗೆ ಮುಂದಿನ ಕ್ರಮಕೈಗೊಳ್ಳಲು ಮುಂದಾಗಿದೆ. ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಹಿತಿ ಪಡೆದು ಮರಣಗಳ ಮಾಹಿತಿಯನ್ನು ಗೃಹಲಕ್ಷ್ಮೀ ಯೋಜನೆಯ ಪೋರ್ಟಲ್ನಲ್ಲಿ ದಾಖಲಿಸಲು ಸಜ್ಜಾಗಿದೆ.