ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಕರ್ನಾಟಕದ ಜನತೆಗೆ ಇದೀಗ ಬಸ್ ಪ್ರಯಾಣ ದರದ ಬಿಸಿಯೂ ತಟ್ಟಲಿದೆ. ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳು ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಚಿಂತನೆ ನಡೆಸಿವೆ. ಡಿಸೇಲ್ ದರ ಏರಿಕೆಯಿಂದ ನಾಲ್ಕು ಸಾರಿಗೆ ನಿಗಮಗಳು ನಷ್ಟ ಸುಳಿಗೆ ಸಿಲುಕಿದ್ದು, ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ. ದರ ಪರಿಷ್ಕರಣೆಯ ಕುರಿತು ಅತುಲ್ ಕುಮಾರ್ ತಿವಾರಿ ಸಮಿತಿಯ ವರದಿ ಶೀಘ್ರದಲ್ಲೇ ಸರಕಾರಕ್ಕೆ ಸಲ್ಲಿಕೆ ಆಗಲಿದೆ.
ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಮಾಧ್ಯಮಗಳಿಗೆ ಸಾರಿಗೆ ನಿಗಮಗಳ ಕುರಿತು ಮಾಹಿತಿ ನೀಡಿದ್ದು, ಕಳೆದ ಬಾರಿ ಬಸ್ ಪ್ರಯಾಣ ದರ ಪರಿಷ್ಕರಣೆಯ ಬೆನ್ನಲ್ಲೇ ಡಿಸೇಲ್ ದರ ಗಣನೀಯವಾಗಿ ಏರಿಕೆಯಾಗಿತ್ತು.
ಆದರೆ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಿರಲಿಲ್ಲ. ಪ್ರತೀ ವರ್ಷ ನಾಲ್ಕು ಸಾರಿಗೆ ನಿಗಮಗಳು ಒಟ್ಟಾಗಿ ಸುಮಾರು 8 ಸಾವಿರದಿಂದ 10 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿವೆ. ಇದೇ ಕಾರಣದಿಂದಲೇ ಬಸ್ ಟಿಕೆಟ್ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ 2021, 2025ರಲ್ಲಿ ಸರಕಾರಿ ಬಸ್ಸುಗಳ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆದರೆ ಆ ನಂತರದಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಕಳೆದ ತಿಂಗಳ ಹಿಂದೆಷ್ಟೆ ಸಿಎಂ ಡಿಕೆ ಶಿವಕುಮಾರ್ ಅವರು ಬಸ್ ಪ್ರಯಾಣ ದರ ಹೆಚ್ಚಳದ ಸುಳಿವು ನೀಡಿದ್ದರು.
ಅತುಲ್ ಕುಮಾರ್ ತಿವಾರಿ ನೇತೃತ್ವದ ಕರ್ನಾಟಕ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಗೆ ಟಿಕೆಟ್ ದರ ಪರಿಷ್ಕರಣೆಯ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸರಕಾರ ಸೂಚನೆಯನ್ನು ನೀಡಿತ್ತು.
ಇದೀಗ ಅತುಲ್ ಕುಮಾರ್ ತಿವಾರಿ ಸಮಿತಿ ರಚನೆಯಾಗಿ 20 ದಿನಗಳ ಕಳೆದಿದ್ದಿ, ನಾಲ್ಕು ಸಾರಿಗೆ ನಿಗಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಶೀಘ್ರದಲ್ಲಿಯೇ ಸಮಿತಿಯು ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಲಿದೆ.
ಸಮಿತಿಯ ವರದಿ ಸಲ್ಲಿಕೆ ಆದ ನಂತರದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೊತೆಗೆ ಚರ್ಚಿಸಿ, ಸಂಪುಟ ಸಭೆಯ ಮುಂದೆ ಇಟ್ಟು ಟಿಕೆಟ್ ದರ ಹೆಚ್ಚಳದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.