ಸಿಎಂ ಡಿ.ಕೆ.ಶಿವಕುಮಾರ್ ಕನಸಿನ ಪ್ರಜಾಸೇವೆ ಅಭಿಯಾನಕ್ಕೆ ಇಂದು ಚಾಲನೆ
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಸಭೆಗಳ ಕುರಿತು 15 ದಿನ ಮುಂಚಿತವಾಗಿ ಮನೆಮನೆಗೆ ಕರಪತ್ರ ಹಂಚಿ ಮಾಹಿತಿ ನೀಡಲಾಗುತ್ತದೆ.
ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ವಿನೂತನ ‘ಪ್ರಜಾಸೇವಾ ಅಭಿಯಾನ’ಕ್ಕೆ ರಾಜ್ಯ ಸರ್ಕಾರ ಇಂದು ಅದ್ಧೂರಿ ಚಾಲನೆ ನೀಡಲಿದೆ. ಪಾರದರ್ಶಕತೆ ತರುವ ಹಾಗೂ ಜನರ ಸಮಸ್ಯೆಗಳಿಗೆ ಅವರ ಮನೆ ಬಾಗಿಲಲ್ಲೇ ಪರಿಹಾರ ಕಲ್ಪಿಸುವ ಮಹತ್ತರ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಈ ಯೋಜನೆಯ ಪ್ರಕಾರ ಪ್ರತಿ ಶನಿವಾರ ರಾಜ್ಯದ ವಿವಿಧೆಡೆ ಜನಸಂಪರ್ಕ ಸಭೆಗಳು ನಡೆಯಲಿವೆ. ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತಾಲೂಕು ಮಟ್ಟದ ಸಭೆಗಳು ಜರುಗಲಿವೆ. ಅದೇ ರೀತಿ ಎರಡು ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ಸಭೆಗಳ ಕುರಿತು 15 ದಿನ ಮುಂಚಿತವಾಗಿ ಮನೆಮನೆಗೆ ಕರಪತ್ರ ಹಂಚಿ ಮಾಹಿತಿ ನೀಡಲಾಗುತ್ತದೆ.
ಈ ಅಭಿಯಾನದ ಪ್ರಮುಖ ವೈಶಿಷ್ಟ್ಯವೆಂದರೆ, ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಒದಗಿಸಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಹಾಗೂ ದೃಢೀಕರಣ ಪತ್ರಗಳನ್ನು ಸ್ಥಳದಲ್ಲೇ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಅರ್ಜಿಗಳ ಸ್ಥಿತಿಗತಿಯನ್ನು ನೈಜ ಸಮಯದಲ್ಲಿ ಪರಿಶೀಲಿಸುವ ತಾಂತ್ರಿಕ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಸಭೆಯಲ್ಲಿ ಸ್ವೀಕೃತವಾಗುವ ಅಹವಾಲುಗಳನ್ನು ಪ್ರತಿ ಬುಧವಾರ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಒಂದು ವೇಳೆ ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರ ದೂರುಗಳು ವಿಲೇವಾರಿಯಾಗದಿದ್ದರೆ, ಆ ಅರ್ಜಿಗಳು ಸ್ವಯಂಚಾಲಿತವಾಗಿ ಮುಂದಿನ ಉನ್ನತ ಅಧಿಕಾರಿಗಳ ಗಮನಕ್ಕೆ ವರ್ಗಾವಣೆಯಾಗುವ ವ್ಯವಸ್ಥೆ ರೂಪಿಸಲಾಗಿದೆ. ಸರ್ಕಾರದ ಈ ಮಹತ್ವಾಕಾಂಕ್ಷಿ ಹೆಜ್ಜೆಯು ಕಚೇರಿಗಳ ವಿಳಂಬ ನೀತಿಗೆ ಮುಕ್ತಿ ಹಾಡಲಿದ್ದು, ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಲಿದೆ ಎಂಬ ನಿರೀಕ್ಷೆ ಮೂಡಿಸಿದೆ.
Topics
ಸಂಬಂಧಿತ ಸುದ್ದಿಗಳು
karnataka
ಜೊಮ್ಯಾಟೋ ಆರ್ಡರ್ನೊಂದಿಗೆ ಬಂತು ಬೀಡಿ..! : ನೆಟ್ಟಿಗರಿಂದ ಭಾರೀ ಆಕ್ರೋಶ
karnataka
ಜಾಮೀನು ರದ್ದತಿ ಬೆನ್ನಲ್ಲೇ ಜೈಲಿನಲ್ಲಿ ಪವಿತ್ರಾಗೆ ಹೊಸ ಸಂಕಷ್ಟ
karnataka
ಕರಾವಳಿ ಹಾಗೂ ಒಳನಾಡಿಗೆ ವರುಣನ ಭೀತಿ : ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ ಮುನ್ಸೂಚನೆ
karnataka

