ಜಾತಿ, ಮತಗಳ ಗಡಿಗಳನ್ನು ಮೀರಿ ಸಮಾಜದ ಒಳಿತಿಗಾಗಿ ಶ್ರಮಿಸುವ ಮೂಲಕ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಮಾದರಿ ನಾಯಕತ್ವ ಮೆರೆದಿದ್ದಾರೆ. ಇತ್ತೀಚೆಗೆ ಬೈಂದೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುರ್ಮಾಸ ಕಾರ್ಯಕ್ರಮದ ಯಶಸ್ಸಿನ ಹಿಂದೆ ಪ್ರಮುಖ ಶಕ್ತಿಯಾಗಿ ನಿಲ್ಲುವ ಮೂಲಕ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ತಾನೊಬ್ಬ ಬಂಟ ಸಮುದಾಯದ ಶಾಸಕನಾಗಿದ್ದರೂ, ಬಿಲ್ಲವ ಸಮುದಾಯದ ಪೂಜ್ಯ ಸ್ವಾಮೀಜಿಯಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಗುರುವಾಗಿ ಸ್ವೀಕರಿಸಿ, ಚಾತುರ್ಮಾಸದ ಮುಖ್ಯ ರೂವಾರಿಯಾಗಿ ಮುಂಚೂಣಿಯಲ್ಲಿ ನಿಂತು ಇಡೀ ಹಿಂದೂ ಸಮಾಜವನ್ನು ಒಟ್ಟುಗೂಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಶಾಸಕರ ಈ ವಿಶಿಷ್ಟ ಹಾಗೂ ಸೌಹಾರ್ದಯುತ ಹೆಜ್ಜೆಗೆ ಬೈಂದೂರು ಬಿಲ್ಲವ ಸಮುದಾಯದಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಸಮಾಜದ ಗಟ್ಟಿ ಒಗ್ಗಟ್ಟಿಗೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ.
ರಾಜ್ಯಾದ್ಯಂತ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲಿರುವ ಪ್ರಮುಖ ಬಿಲ್ಲವ ಸಂಘಟನೆಗಳಿಂದ ಶಾಸಕರ ಈ ಸಂಘಟನಾ ಶಕ್ತಿಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಹ್ರೇನ್, ದುಬೈ, ಬೆಂಗಳೂರು, ಮಹಾರಾಷ್ಟ್ರ ಹಾಗೂ ಉತ್ತರ ಕನ್ನಡ ಸೇರಿದಂತೆ ವಿವಿಧೆಡೆಯ ಬಿಲ್ಲವ ಸಂಘಟನೆಗಳು ಮತ್ತು ಪ್ರಮುಖ ಮುಖಂಡರು ಶಾಸಕರ ನಡೆಯನ್ನು ಹಾಡಿಹೊಗಳುತ್ತಿದ್ದು, ಅಭಿನಂದನೆಗಳ ಸುರಿಮಳೆಯೇ ಹರಿಯುತ್ತಿದೆ.
"ತಾನೊಬ್ಬ ಯಾವುದೇ ಜಾತಿಯಲ್ಲಿ ಜನಿಸಿರಲಿ, ಸನಾತನ ಧರ್ಮದ ತತ್ವದಡಿ ಕೆಲಸ ಮಾಡುವವರನ್ನು ನಾವೆಲ್ಲರೂ ಸಂಭ್ರಮಿಸಬೇಕು, ಗೌರವಿಸಬೇಕು" ಎನ್ನುವ ಉದಾತ್ತ ಮನೋಭಾವದ ಶಾಸಕ ಗುರುರಾಜ್ ಗಂಟಿಹೊಳೆ ಅವರ ಈ ನಡೆ ಸನಾತನ ಧರ್ಮ ಹಾಗೂ ಸಾಮರಸ್ಯದ ನಿಜವಾದ ಪ್ರತೀಕವಾಗಿದೆ ಎಂದು ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.