ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮದಲ್ಲಿ ತೀವ್ರ ಭೂಕುಸಿತದ ಭೀತಿ ಎದುರಾಗಿದ್ದು, ಸ್ಥಳೀಯ ಜನರಲ್ಲಿ ಭೀತಿಯ ವಾತಾವರಣ ಆವರಿಸಿದೆ. ರೇಂಜಾಳ ಗ್ರಾಮದ 'ಹೆಡ್ಮೆ' ಪರಿಸರದಲ್ಲಿ ಕ್ಷಣಕ್ಷಣಕ್ಕೂ ಭೂಮಿ ಜರಿಯುತ್ತಿದ್ದು, ಹರಿಪ್ರಸಾದ್ ಎಂಬುವವರ ಮನೆಯ ಬಳಿ ಭಾರಿ ಪ್ರಮಾಣದ ಮಣ್ಣು ಮತ್ತು ಮರಮಟ್ಟುಗಳು ಮೇಲಿನಿಂದ ಕುಸಿದು ಬೀಳುತ್ತಿವೆ.
ಸುಮಾರು ಎರಡು ಎಕರೆ ವಿಸ್ತೀರ್ಣದ ಜಾಗದ ಮಣ್ಣು ಸಂಪೂರ್ಣವಾಗಿ ಕುಸಿಯುವ ಸಾಧ್ಯತೆಯಿದೆ. ಈಗಾಗಲೇ ಈ ಭೀತಿಯಿಂದಾಗಿ ಮೂರು ಕುಟುಂಬಗಳ ಮನೆಗಳಿಗೆ ಅಪಾಯ ಎದುರಾಗಿದ್ದು, ನಿವಾಸಿಗಳು ಕಂಗಾಲಾಗಿದ್ದಾರೆ. ಘಟನೆಯ ತೀವ್ರತೆಗೆ ಹೆದರಿದ ಸ್ಥಳೀಯರು ಸುರಕ್ಷಿತ ಸ್ಥಳಗಳಿಗೆ ಸ್ವಯಂಪ್ರೇರಿತರಾಗಿ ಸ್ಥಳಾಂತರಗೊಳ್ಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾತ್ರಿ ಬೆಳಗಾಗುವುದರೊಳಗೆ ದೊಡ್ಡ ದೊಡ್ಡ ಬಂಡೆಕಲ್ಲುಗಳೇ ಕುಸಿದು ಬಿದ್ದಿರುವುದು ಪರಿಸ್ಥಿತಿಯ ಭೀಕರತೆಯನ್ನು ಹೆಚ್ಚಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ (ಡಿಸಿ) ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಯಾವುದೇ ಸೂಕ್ತ ಪರ್ಯಾಯ ವಸತಿ ವ್ಯವಸ್ಥೆ ಅಥವಾ ಪರಿಹಾರ ಕಲ್ಪಿಸದೆ ತಕ್ಷಣವೇ ಸ್ಥಳಾಂತರಗೊಳ್ಳುವಂತೆ ಆದೇಶಿಸಿರುವುದು ಸಂತ್ರಸ್ತರ ಆತಂಕವನ್ನು ಇಮ್ಮಡಿಗೊಳಿಸಿದೆ.
ಒಮ್ಮಿಂದೊಮ್ಮೆಗೆ ಎದುರಾದ ಈ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ತಕ್ಷಣದ ನೆರವಿನ ಅಗತ್ಯವಿದೆ. ಮಳೆ ಹೀಗೆಯೇ ಮುಂದುವರಿದರೆ ಕೇರಳದ ವಯನಾಡ್ ಮಾದರಿಯ ಭೀಕರ ಭೂಕುಸಿತ ಸಂಭವಿಸುವ ಸಾಧ್ಯತೆಯಿದ್ದು, ಆಡಳಿತ ಯಂತ್ರ ತಕ್ಷಣವೇ ಎಚ್ಚೆತ್ತು ಸೂಕ್ತ ಪುನರ್ವಸತಿ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.