Kannada News Next

udupi

ಸಾಲದ ಹಣ ಕೇಳಿದ್ದಕ್ಕೆ ಅಮಾನವೀಯ ಕೃತ್ಯ: ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿದ ಯುವತಿ ಕುಟುಂಬ!

ಪ್ರೀತಿಸಿದ ಯುವತಿಯಿಂದ ಪಡೆದ ಸಾಲದ ಹಣ ವಾಪಸ್ ಕೇಳಲು ಹೋದ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.

By Meghana Pranuth | ಮೇಘನಾ ಪ್ರಣೂತ್‌
udupi AtrocityCase

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಧೋಖಾ ನೀಡಿ ಯುವಕನೊಬ್ಬನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೀತಿಸಿದ ಯುವತಿಯಿಂದ ಪಡೆದ ಸಾಲದ ಹಣ ವಾಪಸ್ ಕೇಳಲು ಹೋದ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.

ಒಂದೇ ಸಂಸ್ಥೆಯಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದ ಸನತ್ ಮತ್ತು ಯುವತಿಯ ನಡುವೆ ಪ್ರೀತಿ ಚಿಗುರಿತ್ತು. ಈ ಪ್ರೀತಿಯ ಸಲುಗೆಯಲ್ಲೇ ಯುವತಿಯು ಸನತ್‌ನಿಂದ 50 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದಳು. ಆದರೆ ಹಣ ಪಡೆದ ಕೆಲವೇ ದಿನಗಳಲ್ಲಿ ಯುವತಿ ಕೆಲಸ ತೊರೆದಿದ್ದಾಳೆ.

ಕೆಲಸ ಬಿಟ್ಟ ನಂತರ ಸನತ್ ಕರೆಗಳನ್ನು ಸ್ವೀಕರಿಸದೆ ಯುವತಿ ಸತಾಯಿಸಲು ಶುರುಮಾಡಿದ್ದಳು. ಕೊನೆಗೆ ಸನತ್ ತನ್ನ 50 ಸಾವಿರ ರೂಪಾಯಿ ಹಣ ವಾಪಸ್ ನೀಡುವಂತೆ ಒತ್ತಾಯಿಸಿದಾಗ, ಹಣ ಕೊಡುವುದಾಗಿ ನಂಬಿಸಿ ಮನೆಗೆ ಬರುವಂತೆ ಕರೆಸಿಕೊಂಡಿದ್ದಾಳೆ. ಯುವತಿಯ ಮಾತು ನಂಬಿ ಮನೆಗೆ ತೆರಳಿದ್ದ ಸನತ್‌ನನ್ನು ಯುವತಿಯ ಕುಟುಂಬಸ್ಥರು ಮರಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.

ಹಲ್ಲೆ ನಡೆಸಿದ್ದಷ್ಟೇ ಅಲ್ಲದೆ, ಯುವತಿಯು ಉಲ್ಟಾ ಸನತ್ ಮೇಲೆಯೇ ಲೈಂಗಿಕ ದೌರ್ಜನ್ಯ ಹಾಗೂ ಅಟ್ರಾಸಿಟಿ ಕಾಯ್ದೆಯಡಿ ದೂರು ನೀಡಿದ್ದಾಳೆ. ಇತ್ತ ಹಲ್ಲೆಗೊಳಗಾದ ಸನತ್ ಕೂಡ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತಿಯಾಗಿ ದೂರು ದಾಖಲಿಸಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೈಂದೂರು ಪೊಲೀಸರು ದೂರುಗಳನ್ನು ಸ್ವೀಕರಿಸಿ, ತನಿಖೆ ಆರಂಭಿಸಿದ್ದಾರೆ.