ಉಡುಪಿ (ಆಗಸ್ಟ್ 05): ಕಟಪಾಡಿಯ ಯೇಣಗುಡ್ಡೆಯ ತೇಕಲ್ ತೋಟದ ಬಳಿ ಆಂಬ್ಯುಲೆನ್ಸ್ ಒ೦ದು ನಿಯಂತ್ರಣ ತಪ್ಪಿ ಡಿವೈಡರ್ (Divider) ಡಿಕ್ಕಿ ಹೊಡೆದ ಘಟನೆ ಬುಧವಾರ ನಡೆದಿದೆ.ಮಂಗಳೂರಿನಿಂದ ಉಡುಪಿಯ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಕಟಪಾಡಿ ಜಂಕ್ಷನ್ ದಾಟುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್, ಕ್ಷಣಾರ್ಧದಲ್ಲಿ ಹೆದ್ದಾರಿಯ ಡಿವೈಡರ್ ಹತ್ತಿ, ಎದುರಿನ ಕ್ಯಾರೇಜ್ವೇಗೆ ನುಗ್ಗಿ ರಸ್ತೆಬದಿಯಲ್ಲಿ ನಿಂತಿದೆ.
ಅಪಘಾತದ ತೀವ್ರತೆಗೆ ಆಂಬ್ಯುಲೆನ್ಸ್ನಲ್ಲಿದ್ದ ರೋಗಿ ಹಾಗೂ ಅವರ ಜೊತೆಯಲ್ಲಿದ್ದವರು ತೀವ್ರ ಆತಂಕಕ್ಕೊಳಗಾಗಿದ್ದರು. ಅದೃಷ್ಟವಶಾತ್ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ತಕ್ಷಣವೇ ಗಾಯಾಳು ರೋಗಿ ಮತ್ತು ಅವರ ಸಂಬಂಧಿಕರನ್ನು ಉಡುಪಿಗೆ ಕರೆದೊಯ್ಯಲು ಮತ್ತೊಂದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ, ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.