ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಮಾನ್ಯತೆ ತಂದುಕೊಡುವ ಉದ್ದೇಶದೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದ ಕೆ. ಅಣ್ಣಾಮಲೈ ರಾಜಕೀಯ ಜೀವನ ಅತಂತ್ರವಾಗಿರೋದು ತಿಳಿದಿರುವ ವಿಚಾರ. ಇದೀಗ ಕೆ.ಅಣ್ಣಾಮಲೈ ಬಿಜೆಪಿ ಪಕ್ಷವನ್ನೇ ತೊರೆಯಲಿದ್ದಾರ ಎಂಬ ಊಹಾಪೋಹಗಳೂ ತೀವ್ರ ಬಲವಾಗಿ ಕೇಳಿ ಬರ್ತಿವೆ. ಈ ಎಲ್ಲದರ ನಡುವೆ ಇದೀಗ ಇಂದು ಅಣ್ಣಾಮಲೈ ಪ್ರಮುಖ ಘೋಷಣೆಯೊಂದನ್ನು ಮಾಡುವುದಾಗಿ ಹೇಳಿದ್ದು ತಮಿಳುನಾಡು ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಜೂನ್ 3ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ರನ್ನು ಭೇಟಿ ಮಾಡಿ , ರಾಜೀನಾಮೆ ಸಲ್ಲಿಸಿದ್ದರು ಎಂದು ಹೇಳಲಾಗಿತ್ತು. ಇದಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ಶಾರನ್ನೂ ಅಣ್ಣಾಮಲೈ ಭೇಟಿ ಮಾಡಿ ಬಂದಿದ್ದರು. ಇದಾದ ತಕ್ಷಣವೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಕೂಡ ದೆಹಲಿ ಕಡೆಗೆ ಮುಖ ಮಾಡಿದ್ದರು.
ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಣ್ಣಾಮಲೈ ತಲೆಯಲ್ಲಿಯೂ ಹೊಸ ಪಕ್ಷ ಸ್ಥಾಪನೆಯ ಕನಸು ಚಿಗುರೊಡೆದಿದೆ ಎಂಬ ಊಹಾಪೋಹಗಳು ಕೇಳಿ ಬರ್ತಿವೆ. ಬಿಜೆಪಿಯಲ್ಲಿ ಸಂಪೂರ್ಣ ಸೈಡ್ಲೈನ್ ಆಗಿರುವ ಅಣ್ಣಾಮಲೈ ಸದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ತಮಿಳುನಾಡು ರಾಜಕಾರಣದಲ್ಲಿದ್ದಾರೆ. ಈ ಎಲ್ಲದರ ಬೆನ್ನಲ್ಲೇ ಇಂದು ಮಧ್ಯಾಹ್ನ 12 ಗಂಟೆಗೆ ಎಲ್ಲರೊಂದಿಗೆ ಸಂವಹನ ನಡೆಸುವೆ, ನನ್ನ ಹೃದಯದಿಂದ ಸಂಭಾಷಣೆ ನಡೆಸುವೆ ಎಂದು ಅಣ್ಣಾಮಲೈ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಭಾರೀ ಚರ್ಚೆ ಗ್ರಾಸವಾಗಿದ್ದು, ಅಣ್ಣಾಮಲೈ ರಾಜಕೀಯ ನಡೆ ಬಗ್ಗೆ ಘೋಷಿಸುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.
ದ್ರಾವಿಡರ ನಾಡಿನಲ್ಲಿ ಬಿಜೆಪಿ ಅಸ್ತಿತ್ವಕ್ಕೆ ತರಲು ಪ್ರಯತ್ನಿಸಿದ್ದ ಅಣ್ಣಾಮಲೈಗೆ ಹೈಕಮಾಂಡ್ನಿಂದ ಬೆಂಬಲವೇ ಸಿಕ್ಕಿರಲಿಲ್ಲ. ಹೀಗಾಗಿ ಸಿಂಗಂ ರಾಜಕೀಯ ಕ್ರಾಂತಿಯ ಕನಸು ಕನಸಾಗಿಯೆ ಉಳಿದಿತ್ತು.ಇಂದು ತನ್ನ ಮುಂದಿನ ನಡೆ ಘೋಷಿಸುವ ಸಿದ್ಧತೆಯಲ್ಲಿ ಅಣ್ಣಾಮಲೈ ಇದ್ದಾರೆ ಎನ್ನಲಾಗಿದ್ದು, ಮಧ್ಯಾಹ್ನ 12 ಗಂಟೆ ಬಳಿಕ ಸರಿಯಾದ ಚಿತ್ರಣ ಲಭ್ಯವಾಗಲಿದೆ.
K Annamalai exit from BJP almost fixed – official announcement on next step today
