ಪ್ರತಿವರ್ಷ ಹಿಂದೂ ಕ್ಯಾಲೆಂಡರ್ನ ಐದನೇ ತಿಂಗಳು ಭಾದ್ರಪದ ಮಾಸ ಬಂತೆಂದರೆ ಎಲ್ಲೆಲ್ಲೂ ಸಂಭ್ರಮ ಸಡಗರ. ಭಾದ್ರಪದ ಶುಕ್ಲ ಪಕ್ಷದ ನಾಲ್ಕನೇ ದಿನದಂದು (ಚತುರ್ಥಿ) ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ಈ ದಿನದ ಮಧ್ಯಾಹ್ನದ ಸಮಯದಲ್ಲಿ ಗಣೇಶನು ಕಾಣಿಸಿಕೊಂಡನು ಎಂದು ಹೇಳಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಗಣೇಶ ಚತುರ್ಥಿಯ ಸಿದ್ಧತೆ ಭರದಿಂದ ಸಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಗಣೇಶ ವಿಗ್ರಹಗಳು ಮಾರಾಟಕ್ಕೆ ಬಂದಿವೆ. ಅದಕ್ಕೆ ತಕ್ಕಂತೆ ಅಲಂಕಾರಿಕ ವಸ್ತುಗಳ ಮಾರಾಟವೂ ಜೋರಾಗಿದೆ. ದೇಶದೆಲ್ಲೆಡೆ ಮನೆ ಹಾಗೂ ಸಾರ್ವಜನಿಕ ಮಂಟಪಗಳಲ್ಲಿ ಭಕ್ತಿಭಾವದಿಂದ ಗಣೇಶನನ್ನು ಪ್ರತಿಷ್ಠಾಪಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ.
ಗಣೇಶ ಚತುರ್ಥಿ ಯಾವಾಗ ?
ಈ ಬಾರಿ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 14 ರಂದು ಆಚರಿಸಲಾಗುತ್ತಿದೆ. ಏಕೆಂದರೆ ಪಂಚಾಂಗದ ಪ್ರಕಾರ ಚತುರ್ಥಿ ತಿಥಿಯು ಸೆಪ್ಟೆಂಬರ್ 14 ರ ಬೆಳಿಗ್ಗೆ 7:06 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 15 ರ ಬೆಳಿಗ್ಗೆ 7:44 ಕ್ಕೆ ಮುಕ್ತಾಯಗೊಳ್ಳುತ್ತದೆ.
ಗಣೇಶ ಸ್ಥಾಪನೆಗೆ ಶುಭ ಮುಹೂರ್ತ
ಈ ವರ್ಷ ಗಣೇಶನ ಪ್ರತಿಷ್ಠಾಪನೆ ಮತ್ತು ಪೂಜೆಗೆ ಸೆಪ್ಟೆಂಬರ್ 14 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1:30 ರವರೆಗಿನ ಸಮಯ ಉತ್ತಮವಾಗಿದೆ.
ಗಣೇಶ ಮೂರ್ತಿ ಸ್ಥಾಪನೆ ಹೇಗೆ?
ಗಣೇಶ ಚತುರ್ಥಿಯಂದು ಗಣೇಶನ ಮೂರ್ತಿಯನ್ನು ಮನೆಯ ಅಥವಾ ಪೂಜಾ ಸ್ಥಳದ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಸ್ಥಾಪಿಸುವುದು ಶುಭವೆಂದು ಪರಿಗಣಿಸಲಾಗಿದೆ. ಗಣೇಶನ ವಿಗ್ರಹಕ್ಕೆ ಹೊಂದಿಕೆಯಾಗುವಂತಹ ಒಂದು ಚಿಕ್ಕ ಟೇಬಲ್ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹಾಕಿ ಮೂರ್ತಿಯನ್ನು ಸ್ಥಾಪಿಸಬೇಕು. ದೂರ್ವೆ, ಕೆಂಪು ದಾಸವಾಳ, ಸೇವಂತಿಗೆ ಹೂವುಗಳಿಂದ ಗಣೇಶನನ್ನು ಅಲಂಕರಿಸಿ. ಗಣೇಶನಿಗೆ ಪಂಚಕಜ್ಜಾಯ, ಮೋದಕ, ಲಡ್ಡು, ಕರ್ಜಿಕಾಯಿ ಜೊತೆಗೆ ಪ್ರತಿ ಮನೆಯ ಸಂಪ್ರದಾಯದಂತೆ ನೈವೇದ್ಯ ತಯಾರಿಸಿ ಅರ್ಪಿಸಲಾಗುತ್ತದೆ.