ಬೈಂದೂರು : ಕ್ರಿಕೆಟ್ ಆಟದ ವಿಚಾರದಲ್ಲಿ ಉಂಟಾಗಿರುವ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಹಾಗೂ ಕೊಲೆ ಬೆದರಿಕೆ ಹಾಕಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಐವರ ವಿರುದ್ದ ಪ್ರಕರಣ ದಾಖಲಾಗಿದೆ.
ಕ್ರಿಕೆಟ್ ಆಟದ ಜಗಳವೇ ಮೂಲ ಕಾರಣ
ಬೈಂದೂರು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಪ್ರಕಾರ, ಗೋಳಿಹೊಳೆ ಗ್ರಾಮದ ನಿವಾಸಿ ಶಿವರಾಜ್ ಶೆಟ್ಟಿ (38 ವರ್ಷ) ಹಾಗೂ ಪ್ರತಾಪ್ ಶೆಟ್ಟಿ ಎಂಬುವವರ ನಡುವೆ ಸುಮಾರು ಒಂದು ವರ್ಷದ ಹಿಂದೆ ಕ್ರಿಕೆಟ್ ಆಟ ಆಡುವ ವಿಚಾರದಲ್ಲಿ ದೊಡ್ಡ ಮನಸ್ತಾಪ ಉಂಟಾಗಿತ್ತು. ಈ ಜಗಳದ ನಂತರ ಶಿವರಾಜ್ ಶೆಟ್ಟಿ ಅವರು ಆರೋಪಿ ಪ್ರತಾಪ್ ಶೆಟ್ಟಿಯನ್ನು ಸಂಪೂರ್ಣವಾಗಿ ದೂರವಿಟ್ಟಿದ್ದರು.
ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಪ್ರತಾಪ್ ಶೆಟ್ಟಿ, ಶಿವರಾಜ್ ಅವರ ಕುರಿತು ಊರಿನಲ್ಲಿ ಹಗುರವಾಗಿ ಮಾತನಾಡುವುದಲ್ಲದೆ, ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಮಧ್ಯರಾತ್ರಿ ಕಾರು, ಬೈಕ್ಗಳಲ್ಲಿ ಬಂದು ಅತಿಕ್ರಮ ಪ್ರವೇಶ ಈ ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಪ್ರತಾಪ್ ಶೆಟ್ಟಿ ಮತ್ತು ಆತನ ಗ್ಯಾಂಗ್ ಮೇ 27 ರಂದು ರಾತ್ರಿ 11:15 ಗಂಟೆಯ ಸುಮಾರಿಗೆ ಶಿವರಾಜ್ ಶೆಟ್ಟಿ ಅವರ ಮನೆಗೆ ನುಗ್ಗಿದ್ದಾರೆ.
ಪ್ರತಾಪ್ ಶೆಟ್ಟಿ ತನ್ನ ಸಹಚರರಾದ ರಾಜು, ವಿಘ್ನೇಶ್ ಗಾಣಿಗ, ಪ್ರಸಾದ್ ಆಚಾರಿ ಹಾಗೂ ಇತರರನ್ನು ಜೊತೆಯಲ್ಲಿ ಕರೆದುಕೊಂಡು ಕಾರು ಮತ್ತು ಮೋಟಾರ್ ಸೈಕಲ್ಗಳಲ್ಲಿ ಶಿವರಾಜ್ ಅವರ ಮನೆಯ ಕಂಪೌಂಡಿನೊಳಗೆ ಕಾನೂನುಬಾಹಿರವಾಗಿ ಅತಿಕ್ರಮ ಪ್ರವೇಶ ಮಾಡಿದ್ದಾರೆ.
Also Read : ಉಡುಪಿಯ ಅಂಬಾಗಿಲು ಬಳಿ ಮೀನಿನ ಲಾರಿ ಪಲ್ಟಿ; ಚಾಲಕ ಪಾರು!
ಕೈಯಲ್ಲಿ ಕಬ್ಬಿಣದ ರಾಡ್ಗಳು ಹಾಗೂ ಇತರೆ ಭೀಕರ ಆಯುಧಗಳನ್ನು ಹಿಡಿದುಕೊಂಡು ಬಂದಿದ್ದ ಆರೋಪಿಗಳು, ಮನೆಯಲ್ಲಿದ್ದ ಶಿವರಾಜ್ ಶೆಟ್ಟಿ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ, ಜೋರಾಗಿ ಕಿರುಚಾಡುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೈಲಿಗೆ ಕಳುಹಿಸುವುದಾಗಿ ಅಥವಾ ಜೀವಸಹಿತ ಬಿಡುವುದಿಲ್ಲ ಎಂದು ಕಟುವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲು ಘಟನೆಯಿಂದ ತೀವ್ರ ಭಯಭೀತರಾದ ಶಿವರಾಜ್ ಶೆಟ್ಟಿ ಅವರು ತಡಮಾಡದೆ ಬೈಂದೂರು ಪೊಲೀಸ್ ಠಾಣೆಗೆ ತೆರಳಿ ಪ್ರಮುಖ ಆರೋಪಿಗಳ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಾದ ಪ್ರತಾಪ್ ಶೆಟ್ಟಿ, ರಾಜು, ವಿಘ್ನೇಶ್ ಗಾಣಿಗ ಹಾಗೂ ಪ್ರಸಾದ್ ಆಚಾರಿ ವಿರುದ್ದ ಪ್ರಕರಣ ದಾಖಲಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
