ಉಡುಪಿ ( udupi News) : ನಗರಸಭೆಯ ಪೌರ ಕಾರ್ಮಿಕರ ಮೇಲ್ವಿಚಾರಕರಿಗೆ ಸುಳ್ಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿ, ಹನಿಟ್ರ್ಯಾಪ್ ಬೆದರಿಕೆಯೊಡ್ಡಿ 10 ಲಕ್ಷಕ್ಕೆ ಬೆದರಿಕೆ ಒಡ್ಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಇದೀಗ ಮೂವರ ವಿರುದ್ದ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಹಾಗೂ ಸುಲಿಗೆ ಪ್ರಕರಣ ದಾಖಲಾಗಿದೆ.
ಉಡುಪಿ ನಗರಸಭೆಯ ಯೋಗೀಶ್ ಎಂಬುವರು ಪೊಲೀಸರಿಗೆ ನಗರಭೆಯ ಪೌರ ಕಾರ್ಮಿಕರಾಗಿರುವ ಯೋಗೀಶ್ ಪ್ರಭು, ವಿನಯ್ ಕುಮಾರ್ ಹಾಗೂ ಓರ್ವ ಮಹಿಳಾ ಕಾರ್ಮಿಕೆಯ ವಿರುದ್ದ ದೂರು ನೀಡಿದ್ದಾರೆ.
ಏನಿದು ಘಟನೆ ?
ಯೋಗೀಶ್ ಅವರು ಉಡುಪಿ ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, 2021ರಲ್ಲಿ ಪ್ರಭಾರ ಮೇಲ್ವಿಚಾರಕರಾಗಿ ಬಡ್ತಿ ಪಡೆದಿದ್ದರು. ಈ ವೇಳೆಯಲ್ಲಿ ಯೋಗೀಶ್ ಪ್ರಭು, ವಿನಯ ಕುಮಾರ್ ಹಾಗೂ ಮಹಿಳೆ ಪೌರ ಕಾರ್ಮಿಕರಾಗಿ, ಹೊರಗುತ್ತಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಆರೋಪಿಗಳು ತಮಗೆ ಅನುಕೂಲವಾಗುವಂತೆ ನಿತ್ಯವೂ ಕರ್ತವ್ಯ ನಿಯೋಜನೆ ಮಾಡಬೇಕು. ಇಲ್ಲದಿದ್ರೆ ಮಹಿಳಾ ಪೌರ ಕಾರ್ಮಿಕೆಯನ್ನು ಬಳಸಿಕೊಂಡು ಲೈಂಗಿಕ ಕಿರುಕುಳದ ಸುಳ್ಳು ಆರೋಪ ಹೊರಿಸುವ ಬೆದರಿಕೆ ಒಡ್ಡಿದ್ದರು. ಅಲ್ಲದೇ ಪ್ರಕರಣವನ್ನು ಮುಚ್ಚಿ ಹಾಕಲು 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
₹2 ಲಕ್ಷ ಪಡೆದೂ ಸುಳ್ಳು ಪ್ರಕರಣ ದಾಖಲು
ಆರೋಪಿಗಳು ಯೋಗೀಶ್ ಅವರಿಂದ 2 ಲಕ್ಷ ರೂಪಾಯಿ ಹಣವನ್ನು ಪಡೆದು, ಉಳಿದ 8 ಲಕ್ಷ ರೂಪಾಯಿ ಹಣವನ್ನು ನೀಡುವಂತೆ ಒತ್ತಡ ಹೇರುತ್ತಿದ್ದರು. ಆದರೆ ಇದಕ್ಕೆ ನಿರಾಕರಿಸಿದಾಗ ಪೌರ ಕಾರ್ಮಿಕ ಮಹಿಳೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ದ ಲೈಂಗಿಕ ಅತ್ಯಾಚಾರದ ಸುಳ್ಳು ದೂರು ದಾಖಲಿಸಿದ್ದಳು. ಸದ್ಯ ಯೋಗೀಶ್ ನ್ಯಾಯಾಲದಿಂದ ಜಾಮೀನು ಪಡೆದುಕೊಂಡು, ಮಹಿಳೆ ಸೇರಿ ಮೂವರು ಆರೋಪಿಗಳ ವಿರುದ್ದವೇ ದೂರು ನೀಡಿದ್ದಾರೆ.
ಪೆರಂಪಳ್ಳಿ ಸರ್ಕಲ್ ಬಳಿ ಜಾತಿ ನಿಂದನೆ, ಮತ್ತೆ ಬೆದರಿಕೆ
ಕಳೆದ ಜೂನ್ 30 ರಂದು ದೂರುದಾರರ ಮೊಬೈಲ್ಗೆ ಕರೆ ಮಾಡಿದ ಆರೋಪಿಗಳು ಬಾಕಿ 8 ಲಕ್ಷ ರೂಪಾಯಿ ಹಣ ನೀಡಬೇಕು. ಹಣ ನೀಡದೇ ಇದ್ದಲ್ಲಿ ಮತ್ತೊಮ್ಮೆ ದೂರು ದಾಖಲಿಸುವುದಾಗಿ ಬೆದರಿಸಿದ್ದಾರೆ. ನಂತರ ಜುಲೈ 6 ರಂದು ಮಣಿಪಾಲದ ಪೆರಂಪಳ್ಳಿ ಸರ್ಕಲ್ ಬಳಿಯಲ್ಲಿ ಆರೋಪಿ ಯೋಗೀಶ್ ಪ್ರಭು ಸಿಕ್ಕಿದ್ದು, ತನ್ನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿನಿಂದನೆ ಮಾಡಿದ್ದಾರೆ. ಅಲ್ಲದೇ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
udupi honey trap threat kannada News
