ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕನಿಗೆ ರಿಷಬ್​ ಶೆಟ್ಟಿ ಸನ್ಮಾನ : ಕಾಂತಾರ ಸಿನಿಮಾಗೂ ಈ ದೈವ ನರ್ತಕನಿಗೂ ಇದೆ ವಿಶೇಷ ನಂಟು

ಕಾಂತಾರ ಚಾಪ್ಟರ್​1 ಸಿನಿಮಾ ಜಗತ್ತಿನಾದ್ಯಂತ ಹೊಸ ಇತಿಹಾಸವನ್ನೇ ಬರೆದಿದೆ. ಕೋಟಿ ಕೋಟಿ ಕಲೆಕ್ಷನ್​ ಮಾಡುವಲ್ಲಿ ಯಶಸ್ವಿಯಾಗಿರುವ ಕಾಂತಾರ ಚಾಪ್ಟರ್​ 1 ಸಿನಿಮಾ ರಿಷಬ್​ ಶೆಟ್ಟಿಯವರ ಗರಿಮೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದೆ. ದೈವನರ್ತಕನ ಪಾತ್ರದ ಮೂಲಕ ಜಗದ್ವಿಖ್ಯಾತಿ ಗಳಿಸಿದ ರಿಷಬ್​ ಶೆಟ್ಟಿ ಕಾಂತಾರ ಚಾಪ್ಟರ್​ 1 ಸಿನಿಮಾದ ಯಶಸ್ಸಿನ ಬಳಿಕ ಇದೇ ಮೊದಲ ಬಾರಿಗೆ ಕಡಲನಗರಿ ಮಂಗಳೂರಿಗೆ ಆಗಮಿಸಿದ್ದಾರೆ. ರಾಜ್ಯೋತ್ಸವ ಪುರಸ್ಕೃತ ದೈವ ನರ್ತಕ ಉಮೇಶ್ ಪಂಬದರಿಗೆ ರಿಷಬ್​ ಗೌರವ ಸನ್ಮಾನ ಅರ್ಪಿಸಿದ್ದಾರೆ.
ಮಂಗಳೂರು ನಗರದ ಉರ್ವ ಅಂಬೇಡ್ಕರ್​ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಭಾಗಿಯಾಗಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್​ ಸೇರಿದಂತೆ ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಮಂಗಳೂರಿಗೆ ಆಗಮಿಸಿದ ರಿಷಬ್​ ಶೆಟ್ಟಿಗೆ ಹಾರ ಹಾಕಿ ಬ್ಯಾಂಡ್​ ವಾದ್ಯಗಳ ಮೂಲಕ ಅದ್ಧೂರಿ ಸ್ವಾಗತ ಕೋರಲಾಯ್ತು. ಉಮೇಶ್​ ಪಂಬಂದ ದಂಪತಿಯನ್ನು ಸನ್ಮಾನಿಸಿದ ನಟ ರಿಷಬ್​ ಬಳಿಕ ಜಾನಪದ ಪಾಡ್ದನ ಕಲಾವಿದೆ ಸಿಂಧೂ ಗುಜರನ್​ ಎಂಬವರನ್ನೂ ಸನ್ಮಾನಿಸಿದರು.

ಪ್ರಸಕ್ತ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಉಮೇಶ್​ ಪಂಬದರಿಗೂ ಕಾಂತಾರ ಚಾಪ್ಟರ್​ 1 ಸಿನಿಮಾಗೂ ಒಂದು ನಂಟಿದೆ. ಕಾಂತಾರ ಸಿನಿಮಾ ಹಿಟ್​​ ಆದ ಬಳಿಕ ಪಂಜುರ್ಲಿ ದೈವಕ್ಕೆ ಚಿತ್ರತಂಡ ಕೋಲ ಸೇವೆ ನೀಡಿದ್ದು ನೆನಪಿದ್ದಿರಬಹುದು. ಮಂಗಳೂರಿನ ಬಂದಲೆಯ ಮಡಿವಾಳಬೆಟ್ಟು ಮನೆಯಲ್ಲಿ ನಡೆದಿದ್ದ ಕೋಲ ಸೇವೆಯಲ್ಲಿ ಇದೇ ಉಮೇಶ್​ ಪಂಬದ ಅಣ್ಣಪ್ಪ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದರು.ಇದೇ ಕೋಲ ಸೇವೆಯಲ್ಲಿ ಕಾಂತಾರ ಚಾಪ್ಟರ್​ 1 ಸಿನಿಮಾ ಮಾಡಲು ದೈವ ಸಮ್ಮತಿ ನೀಡಿತ್ತು.

ಇದನ್ನೂ ಓದಿ: ವುಮೆನ್ ಕಾರ್ಡ್ ಇಲ್ಲಿ ವರ್ಕ್ ಆಗಲ್ಲ, ಅಶ್ವಿನಿ ಗೌಡಗೆ ಕಿಚ್ಚನ ಕ್ಲಾಸ್‌!

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಮೇಶ್​ ಪಂಬದ ಮೂಲತಃ ಮಂಗಳೂರು ತಾಲೂಕಿನ ಯೆಯ್ಯಾಡಿ ಒಳಗುಡ್ಡೆ ನಿವಾಸಿಯಾಗಿದ್ದಾರೆ. ಅನೇಕ ವರ್ಷಗಳಿಂದ ಉಮೇಶ ಪಂಬಂದರು ದೈವ ನರ್ತನ ಸೇವೆ ನೀಡುತ್ತಾ ಬಂದಿದ್ದಾರೆ. ಇವರ ಸೇವೆಯನ್ನು ಗಮನಿಸಿದ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

Exit mobile version