ಪುತ್ತೂರು : ಉಪ್ಪಿನಂಗಡಿಯ ಬಜತ್ತೂರಿನಲ್ಲಿ ನೂತನ ಟೋಲ್​ ಪ್ಲಾಜಾ ನಿರ್ಮಾಣ : ಎಂದಿನಿಂದ ಕಾರ್ಯಾರಂಭ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದಲ್ಲಿ ನೂತನ ಟೋಲ್​ ಪ್ಲಾಜಾ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮುಂದಿನ ಏಪ್ರಿಲ್​ ತಿಂಗಳಿನಿಂದ ಕಾರ್ಯನಿರ್ವಹಿಸಲಿದೆ. ಈ ಟೋಲ್​ ಪ್ಲಾಜಾ ಕಾರ್ಯಾರಂಭಗೊಂಡ ಬಳಿಕ ವಾಹನ ಸವಾರರು ಇಲ್ಲಿ ಟೋಲ್​ ಪಾವತಿ ಮಾಡಿ ಸಂಚರಿಸಬೇಕಿದೆ.

ಬೆಂಗಳೂರು – ಮಂಗಳೂರು ಮಾರ್ಗವಾಗಿ ತೆರಳುವಾಗ ಒಟ್ಟೂ ಆರು ಟೋಲ್​ ಪ್ಲಾಜಾಗಳಲ್ಲಿ ಹಣ ಪಾವತಿ ಮಾಡಬೇಕಿತ್ತು. ನೆಲಮಂಗಲ ಹಾಗೂ ಸಕಲೇಶಪುರ ನಡುವೆ 5, ದಕ್ಷಿಣ ಕನ್ನಡ ಜಿಲ್ಲೆ ಬಿ.ಸಿ ರೋಡ್​ನಲ್ಲಿರುವ ಬ್ರಹ್ಮರಕೂಟ್ಲುವಿನಲ್ಲಿ 1 ಪ್ಲಾಜಾ ವಾಹನ ಸವಾರರಿಗೆ ಸಿಗುತ್ತಿತ್ತು. ಇನ್ಮುಂದೆ ಈ ಸಾಲಿಗೆ ಬಜತ್ತೂರು ಟೋಲ್​ ಕೂಡ ಸೇರ್ಪಡೆಗೊಳ್ಳಲಿದೆ.

ಕೆಎನ್​ಆರ್​ ಕನ್​ಸ್ಟ್ರಕ್ಷನ್​ ಲಿಮಿಟೆಡ್​ ಕಂಪನಿಯು ಬಿ.ಸಿ ರೋಡ್​ನಿಂದ ಪೆರಿಯಶಾಂತಿವರೆಗೆ 46 ಕಿಲೋಮೀಟರ್​ ರಸ್ತೆ ಮಾರ್ಗವನ್ನು ಗುತ್ತಿಗೆ ಪಡೆದಿದೆ. ಇದೀಗ ಬಜತ್ತೂರಿನಲ್ಲಿ ಟೋಲ್​ ನಿರ್ಮಾಣ ಮಾಡಲಾಗುತ್ತಿದ್ದು ಒಂದು ಮಾರ್ಗಕ್ಕೆ ತಲಾ 4 ಲೇನ್​ಗಳಂತೆ ಒಟ್ಟೂ 8 ಲೇನ್​ಗಳ ವ್ಯವಸ್ಥೆ ಮಾಡಲಾಗಿದೆ.ಅದೇ ರೀತಿ ಬೈಕ್​ಗಳು, ಆಟೋರಿಕ್ಷಾ ಸೇರಿದಂತೆ ವಿವಿಧ ವಾಹನಗಳಿಗೆ ಪ್ರತ್ಯೇಕ ಲೇನ್​ ವ್ಯವಸ್ಥೆ ನಿರ್ಮಾಣಗೊಳ್ಳುತ್ತಿದೆ.

ಇದನ್ನೂ ಓದಿ: ಮಂಗಳೂರಿನ ನ್ಯಾಯಾಲಯಕ್ಕೂ ತಟ್ಟಿದ ಜೈಲು ಜಾಮರ್‌ ಎಫೆಕ್ಟ್ : ನೆಟ್ವರ್ಕ್ ಸಿಗದೇ ಹೈಕೋರ್ಟ್ ಮೆಟ್ಟಿಲೇರಿದ ವಕೀಲರು

ಬಿ.ಸಿ ರೋಡ್​ನಲ್ಲಿರುವ ಬ್ರಹ್ಮರಕೂಟ್ಲುವಿನಲ್ಲಿ ಟೋಲ್​ ಪ್ಲಾಜಾ ನಿರ್ಮಾಣವಾದ ಬಳಿಕ ಶುರುವಾದ ಜನಾಕ್ರೋಶ ಇಂದಿಗೂ ಆರಿಲ್ಲ. ಇದೀಗ ಈ ಸಾಲಿಗೆ ಬಜತ್ತೂರು ಟೋಲ್​ ಕೂಡ ಸೇರಲಿದ್ಯಾ ಎಂಬ ಅನುಮಾನ ದಟ್ಟವಾಗಿದೆ.

Exit mobile version