ಚೈತ್ರಾ ಕುಂದಾಪುರ ತಂದೆಗೆ ಹಿಂಸೆ ನಿಷೇಧ: ಮನೆಯಲ್ಲಿ ನಿರ್ಭೀತಿಯಿಂದ ವಾಸಕ್ಕೆ ಅವಕಾಶ ನೀಡುವಂತೆ ಆದೇಶ

ಉಡುಪಿ: ಚೈತ್ರಾ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯಕ್ ಅವರಿಗೆ ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಹಿಂಸೆ ನೀಡುವಂತಿಲ್ಲ. ಅವರು ತಮ್ಮ ಮನೆಯಲ್ಲಿ ನಿರ್ಭೀತಿಯಿಂದ ವಾಸಿಸಲು ಅವಕಾಶ ಮಾಡಿಕೊಡಬೇಕು ಎಂದು ಕುಂದಾಪುರ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಆದೇಶಿಸಿದೆ.
ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆಯಡಿ ಬಾಲಕೃಷ್ಣ ನಾಯಕ್ ಅವರು ಪುತ್ರಿಯಿಂದ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿದ್ದರು. ತನ್ನ ಸ್ವಂತ ಮನೆಯಲ್ಲಿ ವಾಸಿಸಲು ಅವಕಾಶ ನೀಡಬೇಕು, ಆಸ್ತಿಯಿಂದ ಬರುವ ಬಾಡಿಗೆ ತನ್ನಿಗೆ ದೊರೆಯಬೇಕು ಹಾಗೂ ರಕ್ಷಣೆ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದರು.
ಅರ್ಜಿದಾರರ ವಾದ ಆಲಿಸಿದ ಉಪವಿಭಾಗಾಧಿಕಾರಿಗಳ ನ್ಯಾಯಾಲಯ, ತಂದೆಗೆ ಮಗಳು ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಕಿರುಕುಳ ನೀಡಬಾರದು. ಅವರ ಸ್ವತ್ತಿನ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಮತ್ತು ಮನೆಯಲ್ಲಿ ಶಾಂತಿಯಿಂದ ವಾಸಿಸಲು ಅವಕಾಶ ಕಲ್ಪಿಸಬೇಕು ಎಂದು ಆದೇಶಿಸಿದೆ.
ಬಾಲಕೃಷ್ಣ ನಾಯಕ್ ಅವರು, ಮಗಳ ಅವ್ಯವಹಾರದಿಂದ ಬೇಸತ್ತು ಮನೆ ಬಿಟ್ಟು ಮಂಗಳೂರಿನಲ್ಲಿ ಹೋಟೆಲ್ ಕೆಲಸಕ್ಕೆ ಸೇರಬೇಕಾಯಿತು. ಮನೆಗೆ ಬಂದಾಗ ಪತ್ನಿ ಮತ್ತು ಮಗಳು ಪ್ರವೇಶಕ್ಕೆ ಅವಕಾಶ ನೀಡುತ್ತಿರಲಿಲ್ಲ ಹಾಗೂ ಸಾರ್ವಜನಿಕವಾಗಿ ಮಾನಹಾನಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಪ್ರಕರಣ : ಕೊನೆಗೂ ಶಿವಮೊಗ್ಗ ಜೈಲಿನಿಂದ ಹೊರಬಂದ ಚಿನ್ನಯ್ಯ.!

ಈ ಪ್ರಕರಣದ ವಿಚಾರಣೆ ನಡೆಸಿದ ಸಹಾಯಕ ಕಮಿಷನರ್ ರಶ್ಮೀ ಎಸ್.ಆರ್., ಬಾಡಿಗೆ ಹಣಕ್ಕೆ ಸಂಬಂಧಿಸಿದ ದಾಖಲೆಗಳು ಸಲ್ಲಿಕೆಯಾಗಿಲ್ಲ. ಪ್ರಸ್ತುತ ಚೈತ್ರಾ ಕುಂದಾಪುರ ಅವರು ಆ ಮನೆಯಲ್ಲಿ ವಾಸಿಸುತ್ತಿಲ್ಲವಾದರೂ, ಮುಂದಿನ ದಿನಗಳಲ್ಲಿ ತಂದೆಯ ವಾಸಕ್ಕೆ ಯಾವುದೇ ತೊಂದರೆ ನೀಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಬಾಲಕೃಷ್ಣ ನಾಯಕ್ ಪರವಾಗಿ ನ್ಯಾಯವಾದಿ ಕೆ.ಸಿ. ಶೆಟ್ಟಿ (ಕುಂದಾಪುರ) ವಾದ ಮಂಡಿಸಿದ್ದರು.

Exit mobile version