ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಹಾಗೂ ಕಥಾನಾಯಕ ಚಿಕ್ಕಣ್ಣ ಅವರು ತಮ್ಮ ಬ್ಯಾಚುಲರ್ ಜೀವನಕ್ಕೆ ಗುಡ್ಬೈ ಹೇಳಲು ಸಜ್ಜಾಗಿದ್ದಾರೆ. ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಚಿಕ್ಕಣ್ಣ, 'ರಾಕಿಂಗ್ ಸ್ಟಾರ್' ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯನ್ನು ವೈಯಕ್ತಿಕವಾಗಿ ಭೇಟಿಯಾಗಿ ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ್ದಾರೆ.
'ರಾಜಾಹುಲಿ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಯಶ್ ಜೊತೆ ಅಭಿನಯಿಸಿದ್ದ ಚಿಕ್ಕಣ್ಣ, ಅವರೊಂದಿಗೆ ಆಪ್ತ ಸ್ನೇಹವನ್ನು ಕಾಯ್ದುಕೊಂಡು ಬಂದಿದ್ದಾರೆ. ಇದೇ ಆತ್ಮೀಯತೆಯಿಂದ ಯಶ್ ಮನೆಗೆ ತೆರಳಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಯಶ್ ದಂಪತಿ ಮಾತ್ರವಲ್ಲದೆ, ಚಿತ್ರರಂಗ ಹಾಗೂ ರಾಜಕೀಯ ರಂಗದ ಪ್ರಮುಖ ಗಣ್ಯರಿಗೂ ಚಿಕ್ಕಣ್ಣ ಮದುವೆ ಕರೆಯೋಲೆ ತಲುಪಿಸುತ್ತಿದ್ದಾರೆ.
ಚಿಕ್ಕಣ್ಣ ಅವರ ವಿವಾಹ ಮಹೋತ್ಸವವು ಆಗಸ್ಟ್ 29 ಮತ್ತು 30 ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ನೆರವೇರಲಿದ್ದು, ಮದುವೆ ಸಂಭ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.
ಚಿಕ್ಕಣ್ಣ ಅವರ ಕೈಹಿಡಿಯಲಿರುವ ಹುಡುಗಿಯ ಹೆಸರು ಪಾವನಾ. ಇವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದವರಾಗಿದ್ದು, ಇದು ಹಿರಿಯರು ನಿಶ್ಚಯಿಸಿರುವ ಮದುವೆಯಾಗಿದೆ . ಇತ್ತೀಚೆಗಷ್ಟೇ ಕುಟುಂಬಸ್ಥರ ಸಮ್ಮುಖದಲ್ಲಿ ಸದ್ದಿಲ್ಲದೆ ಹೂ ಮುಡಿಸುವ ಶಾಸ್ತ್ರ ಹಾಗೂ ನಿಶ್ಚಿತಾರ್ಥ ನೆರವೇರಿತ್ತು.
ವಿವಿಧ ಟಾಕ್ ಶೋ ಹಾಗೂ ಕಾರ್ಯಕ್ರಮಗಳಲ್ಲಿ ಮದುವೆ ವಿಚಾರ ಬಂದಾಗಲೆಲ್ಲಾ ತಮಾಷೆ ಮಾಡುತ್ತಾ ವಿಷಯ ದಾಟಿಸುತ್ತಿದ್ದ ಚಿಕ್ಕಣ್ಣ, ಕೊನೆಗೂ ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿರುವುದು ಅವರ ಅಭಿಮಾನಿಗಳಿಗೆ ತೀವ್ರ ಸಂತಸ ತಂದಿದೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ಚಿಕ್ಕಣ್ಣ-ಪಾವನಾ ಜೋಡಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.