ಬೆಂಗಳೂರು : ಕರ್ನಾಟಕದಲ್ಲಿ 2028ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Ex CM Siddaramaiah) ಅವರು ಸ್ಪರ್ಧೆ ಮಾಡ್ತಾರಾ ಅನ್ನೋ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಇನ್ಮುಂದೆ ಯಾವುದೇ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಅಲ್ಲದೇ ತಾನು ಯಾವ ಕಾರಣಕ್ಕೆ ಸ್ಪರ್ಧೆ ಮಾಡುವುದಿಲ್ಲ ಅನ್ನುವ ಕುರಿತು ಮೂರು ಕಾರಣಗಳನ್ನು ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಶನಿವಾರ ಆಯೋಜಿಸಿದ್ದ ಖಾಸಗಿ ಸಮಾರಂಭವೊಂದರಲ್ಲಿ ಅವರು ಮಾತನಾಡಿದ್ದಾರೆ. 2028ರ ಚುನಾವಣೆಯಲ್ಲಿ ಸ್ಪರ್ಧೆಯ ಕುರಿತು ಅವರು ಮನಬಿಚ್ಚಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರ ಈ ಘೋಷಣೆ ಸದ್ಯ ಕರ್ನಾಟಕದ ರಾಜಕೀಯದಲ್ಲಿಯೇ ಹೊಸ ಸಂಚಲನ ಮೂಡಿಸಿದೆ.
ಕಲುಷಿಗೊಂಡ ರಾಜಕೀಯ, ಸ್ಪರ್ಧೆ ಮಾಡಲಾರೆ : ಸಿದ್ದು
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಕ್ಕೆ ಒಟ್ಟು ಮೂರು ಕಾರಣಗಳನ್ನು ನೀಡಿದ್ದಾರೆ. ಅದ್ರಲ್ಲೂ ರಾಜಕೀಯ ಕ್ಷೇತ್ರ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಪ್ರಾಮಾಣಿಕವಾಗಿ ರಾಜಕೀಯ ಮಾಡುವುದಕ್ಕೆ ಉಳಿಗಾಲವಿಲ್ಲ. ಜೊತೆಗೆ ನನ್ನ ಆರೋಗ್ಯವೂ ಸಧೃಢವಾಗಿಲ್ಲ, ಅಲ್ಲದೇ ವಯಸ್ಸು ಉತ್ಸಾಹದಿಂದ ಕೆಲಸ ಮಾಡಲು ಸಪೋರ್ಟ್ ಮಾಡ್ತಾ ಇಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಚುನಾವಣಾ ನಿವೃತ್ತಿಗೆ ಇದೇ 3 ಕಾರಣ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯದಿಂದ ದೂರ ಉಳಿಯೋದಕ್ಕೆ ತನ್ನ ವಯಸ್ಸಿನ ಕಾರಣ ನೀಡಿದ್ದಾರೆ. ನನಗೆ ಇದೀಗ 79 ವರ್ಷ ವಯಸ್ಸು, ಕಾಂಗ್ರೆಸ್ ಸರಕಾರದ ಅವಧಿ ಇನ್ನೂ ಒಂದೂವರೆ ವರ್ಷ ಇದೆ. ಮುಂದಿನ ಚುನಾವಣೆಯ ಹೊತ್ತಿಗೆ ನನ್ನ ವಯಸ್ಸು 82 ಆಗಲಿದೆ. ಹೀಗಾಗಿ ಮೊದಲಿನಂತೆ ಉತ್ಸಾಹದಿಂದ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
1978ರಲ್ಲಿ ತಾಲೂಕು ಮಂಡಳಿಯ ಸದಸ್ಯನಾಗಿ ರಾಜಕೀಯ ಆರಂಭಿಸಿದ್ದ ನಾನು ಸೋಲು ಗೆಲುವುಗಳನ್ನು ಕಂಡಿದ್ದೇನೆ. ಆದರೆ ನನ್ನ ಸಿದ್ದಾಂತದ ವಿರುದ್ದವಾಗಿ ನಾನು ಎಂದಿಗೂ ನಡೆದುಕೊಂಡಿಲ್ಲ. ಆತ್ಮಸಾಕ್ಷಿಗೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲಾ ಅನ್ನೋ ತೃಪ್ತಿ ನನಗಿದೆ. 2028ರ ಚುನಾವಣೆಯ ಹೊತ್ತಿಗೆ ನನಗೆ 82 ವರ್ಷ ವಯಸ್ಸು ಆಗಲಿದ್ದು, ರಾಜಕೀಯ ಜೀವನಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ ಎಂದಿದ್ದಾರೆ.
ರಾಜ್ಯದ ಜನತೆಯ ಋಣಭಾರ ನನ್ನ ಮೇಲಿದೆ
ಕರ್ನಾಟಕದಲ್ಲಿ ಸುಮಾರು ಐದು ದಶಕಗಳ ಕಾಲ ರಾಜ್ಯದ ಜನತೆ ನನ್ನನ್ನು ತಮ್ಮಲ್ಲಿ ಓರ್ವ ಎನ್ನುವಂತೆ ಕಂಡಿದ್ದಾರೆ. ಕರ್ನಾಟಕದ ಜನತೆ ನನ್ನನ್ನು ಪ್ರೀತಿಯಿಂದ ಸಲಹಿದ್ದಾರೆ. ಈ ಋಣಭಾರ ನನ್ನ ಮೇಲಿದೆ. ನನ್ನ ಮುಂದಿನ ಸಂಪೂರ್ಣ ಜೀವನವನ್ನು ಜನ ಸೇವೆಗಾಗಿಯೇ ಮೀಸಲಿಡುತ್ತೇನೆ ಎಂದಿದ್ದಾರೆ.
Ex CM Siddaramaiah Signals Political Retirement 2028 Election
