ಬೆಂಗಳೂರು: ನಗರ ಪ್ರದೇಶಗಳ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಎಲ್ಲೆಂದರಲ್ಲಿ ಆಹಾರ ಧಾನ್ಯಗಳನ್ನು ಹಾಕುವ ಪ್ರವೃತ್ತಿಗೆ ರಾಜ್ಯ ಸರ್ಕಾರ ಈಗ ಅಧಿಕೃತವಾಗಿ ಬ್ರೇಕ್ ಹಾಕಿದೆ. ಪ್ರಾಣಿ ಮತ್ತು ಪಕ್ಷಿ ಪ್ರಿಯರು ರಸ್ತೆಗಳು, ಪಾದಚಾರಿ ಮಾರ್ಗಗಳು ಹಾಗೂ ಸಾರ್ವಜನಿಕ ಉದ್ಯಾನವನಗಳಲ್ಲಿ ಮುಕ್ತವಾಗಿ ಆಹಾರ ನೀಡುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆಯು ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಈ ಹೊಸ ನಿಯಮಗಳ ಪ್ರಕಾರ, ಇನ್ಮುಂದೆ ಸಾರ್ವಜನಿಕರು ತಮಗೆ ಇಷ್ಟಬಂದ ಜಾಗದಲ್ಲಿ ಪಕ್ಷಿಗಳಿಗೆ ಆಹಾರ ಉಣಿಸುವಂತಿಲ್ಲ.
ಇತ್ತೀಚಿನ ದಿನಗಳಲ್ಲಿ ಪಟ್ಟಣಗಳಲ್ಲಿ ಪಾರಿವಾಳಗಳ ಸಂಖ್ಯೆ ಮಿತಿಮೀರಿ ಹೆಚ್ಚುತ್ತಿರುವುದು ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮುಖ್ಯವಾಗಿ ಪಾರಿವಾಳಗಳ ಹಿಕ್ಕೆ ಹಾಗೂ ಗರಿಗಳಿಂದ ಹರಡುವ ಧೂಳಿನಲ್ಲಿ ಕ್ರಿಪ್ಟೋಕಾಕಸ್ ಫಂಗಸ್ ಮತ್ತು ಹಿಸ್ಟೋಪ್ಲಾಸ್ಮೋಸಿಸ್ನಂತಹ ಮಾರಕ ರೋಗಾಣುಗಳು ಇರುತ್ತವೆ.
ಇವುಗಳು ಮನುಷ್ಯನ ಶ್ವಾಸಕೋಶವನ್ನು ಪ್ರವೇಶಿಸಿದಾಗ ತೀವ್ರ ನಿಗಾ ವಹಿಸಬೇಕಾದ ಅತಿಸೂಕ್ಷ್ಮ ನ್ಯುಮೋನಿಟಿಸ್ನಂತಹ ಉಸಿರಾಟದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ವಿಶೇಷವಾಗಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ವೃದ್ಧರು ಹಾಗೂ ಮೊದಲೇ ಅಸ್ತಮಾ ಹೊಂದಿರುವ ರೋಗಿಗಳಿಗೆ ಇದು ಪ್ರಾಣಾಂತಿಕವಾಗಿ ಪರಿಣಮಿಸಬಹುದು.
ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರವು ಕೇವಲ ನಿಗದಿತ ಸ್ಥಳಗಳಲ್ಲಿ ಹಾಗೂ ನಿಗದಿತ ಸಮಯವಾದ ಬೆಳಗ್ಗೆ 7 ರಿಂದ 9 ಗಂಟೆಯವರೆಗೆ ಮಾತ್ರ ಆಹಾರ ನೀಡಲು ಅನುಮತಿ ನೀಡಿದೆ. ಅಲ್ಲದೆ ಆಹಾರ ನೀಡಿದ ತಕ್ಷಣ ಆ ಜಾಗವನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕಾಗುತ್ತದೆ.
ವಿಮಾನ ನಿಲ್ದಾಣಗಳ ಸುತ್ತಮುತ್ತಲಿನ ವಲಯಗಳಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದ್ದು, ಈ ಕಟ್ಟುನಿಟ್ಟಿನ ನಿಯಮಗಳನ್ನು ತಕ್ಷಣದಿಂದಲೇ ಜಾರಿಗೆ ತರಲು ಆರೋಗ್ಯ ಇಲಾಖೆಯು ಸ್ಥಳೀಯ ಮಹಾನಗರ ಪಾಲಿಕೆಗಳು ಮತ್ತು ಮುನ್ಸಿಪಲ್ ಸಂಸ್ಥೆಗಳಿಗೆ ಕಠಿಣ ನಿರ್ದೇಶನ ನೀಡಿದೆ. ಸಾರ್ವಜನಿಕರು ಈ ಶಿಸ್ತು ಕ್ರಮಗಳನ್ನು ಪಾಲಿಸುವ ಮೂಲಕ ನಗರದ ಸ್ವಚ್ಛತೆ ಹಾಗೂ ಸಮುದಾಯದ ಆರೋಗ್ಯ ರಕ್ಷಣೆಗೆ ಸಹಕರಿಸಬೇಕೆಂದು ಪಾಲಿಕೆಗಳು ಮನವಿ ಮಾಡಿವೆ.
