ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾವಿಷ್ಣು ಲೋಕಕಲ್ಯಾಣಕ್ಕಾಗಿ ದಶಾವತಾರ ತಾಳಿ ತನ್ನ ಭಕ್ತರನ್ನು ರಕ್ಷಿಸಿದ್ದಾನೆ ಎಂಬ ನಂಬಿಕೆಯಿದೆ. ಮಹಾ ವಿಷ್ಣುವಿನ ಹತ್ತು ಅವತಾರಗಳಲ್ಲಿ ಎಂಟನೇ ಅವತಾರವೇ ಶ್ರೀಕೃಷ್ಣಾವತಾರ. ಹಿಂದೂ ಧರ್ಮದಲ್ಲಿ ಶ್ರೀಕೃಷ್ಣನು ಅವತಾರಪುರುಷನಾಗಿ ಭೂಮಿಗೆ ಬಂದ ದಿನವನ್ನು ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. ಪ್ರತಿವರ್ಷ ಶ್ರೀಕಷ್ಣ ಜನ್ಮಾಷ್ಟಮಿಯನ್ನು ಶ್ರಾವಣ ಮಾಸದ, ಕೃಷ್ಣ ಪಕ್ಷದ, ಅಷ್ಟಮಿ ತಿಥಿಯಂದು ಆಚರಿಸಲಾಗುತ್ತದೆ. ಬಾಲಗೋಪಾಲನನ್ನು ತೊಟ್ಟಿಲಲ್ಲಿಟ್ಟು ತೂಗಿ ಪೂಜಿಸಲಾಗುತ್ತದೆ. ಈ ವರ್ಷ ಕೃಷ್ಣ ಜನ್ಮಾಷ್ಟಮಿ ಆಚರಣೆ ದಿನಾಂಕ, ಶುಭ ಸಮಯ, ಪೂಜಾ ವಿಧಾನಗಳೇನು ಎಂದು ನೋಡೋಣ.
ಶ್ರೀಕೃಷ್ಣ ಜನ್ಮಾಷ್ಟಮಿ ಯಾವಾಗ?
ಈ ವರ್ಷ ಅಷ್ಟಮಿ ತಿಥಿಯು ಸೆಪ್ಟೆಂಬರ್ 3, ಗುರುವಾರ ಬೆಳಗಿನ ಜಾವ 02:25 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 4, ಶುಕ್ರವಾರ ಬೆಳಗಿನ ಜಾವ 12:13 ಕ್ಕೆ ಕೊನೆಗೊಳ್ಳುತ್ತದೆ.
ಉಪವಾಸ ಆಚರಣೆ ಪ್ರಾರಂಭ ಮತ್ತು ಮುಕ್ತಾಯ
ಜನ್ಮಾಷ್ಟಮಿ ಉಪವಾಸ ಆಚರಣೆಯನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಸೆಪ್ಟೆಂಬರ್ 4, ಶುಕ್ರವಾರದಂದು ಇಡೀ ಹಗಲು ಮತ್ತು ರಾತ್ರಿ ನಡೆಸಲಾಗುತ್ತದೆ. ಹಿಂದೂ ಪಂಚಾಂಗದ ಲೆಕ್ಕಾಚರದ ಪ್ರಕಾರ ಉಪವಾಸ ವೃತದ ಪಾರಣವನ್ನು ಸೆಪ್ಟೆಂಬರ್ 05 ರ ಸೂರ್ಯೋದಯದ ನಂತರ ಬೆಳಿಗ್ಗೆ 06 ಗಂಟೆಗೆ ನಂತರ ಮಾಡಬಹುದು.
ಜನ್ಮಾಷ್ಟಮಿ ಆಚರಣೆ ಹೇಗೆ?
ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆ ಧರಿಸಿ.
ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ.
ಬಾಲಗೋಪಾಲನ ತೊಟ್ಟಿಲನ್ನು ಅಲಂಕರಿಸಿ.
ಶ್ರೀಕೃಷ್ಣನಿಗೆ ಗಂಗಾಜಲ, ಹಾಲು ಮತ್ತು ಪಂಚಾಮೃತದಿಂದ ಅಭಿಷೇಕ ಮಾಡಿ.
ನಂತರ ಹೂವು, ಹಾರ, ಬಟ್ಟೆಯನ್ನು ಹಾಕಿ ಅಲಂಕರಿಸಿ.
ಇದಾದ ಬಳಿಕ ತೊಟ್ಟಿಲಿನಲ್ಲಿ ಇರಿಸಿ, ತೂಗಿ.
ಶ್ರೀಕೃಷ್ಣನ ಹಾಡು, ಕೀರ್ತನೆ ಹೇಳಿ.
ಕೃಷ್ಣನಿಗೆ ಪ್ರಿಯವಾದ ನೈವೇದ್ಯ ಅರ್ಪಿಸಿ.