ಬೆಂಗಳೂರು : ಕರ್ನಾಟಕದ ವಾಹನ ಸವಾರರಿಗೆ ಸಾರಿಗೆ ಇಲಾಖೆ ಭರ್ಜರಿ ಶಾಕ್ ಕೊಟ್ಟಿದೆ. ವಾಹನಗಳಿಗೆ ಮಾಲಿನ್ಯ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದ್ದು, ಇದೀಗ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಪರಿಷ್ಕರಣೆ ಮಾಡಿ ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ವಾಯು ಮಾಲಿನ್ಯಕ್ಕೆ ವಾಹನಗಳ ಹೊಗೆ ಅತೀ ಹೆಚ್ಚು ಕಾರಣವಾಗುತ್ತದೆ. ಇದೇ ಕಾರಣದಿಂದಲೇ ವಾಹನಗಳಿಗೆ ಮಾಲಿನ್ಯ ತಪಾಸಣೆಯನ್ನು ಸರಕಾರಗಳು ಈಗಾಗಲೇ ಕಡ್ಡಾಯಗೊಳಿಸಿವೆ. ಇನ್ಮುಂದೆ ಪಿಯುಸಿ ಪ್ರಮಾಣ ಪತ್ರವನ್ನು ಪಡೆಯುವಾಗ ನೀಡಲಾಗುತ್ತಿದ್ದ ಶುಲ್ಕವನ್ನು ದುಪ್ಪಟ್ಟು ಹೆಚ್ಚಳ ಮಾಡಲಾಗಿದೆ.
ಕನಿಷ್ಠ ಶೇಕಡಾ 5 ರಿಂದ ಗರಿಷ್ಠ 40ರವರೆಗೆ ಹೆಚ್ಚಳ ಮಾಡಲಾಗಿದೆ. ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಹಣಾ ವೆಚ್ಚ ಹಾಗೂ ಇತರ ಖರ್ಚುಗಳ ಹೆಚ್ಚಳದ ಕಾರಣದಿಂದಾಗಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ಮುಂದೆ ವಾಹನ ಮಾಲೀಕರು ತಮ್ಮ ವಾಹನದ ಮಾಲಿನ್ಯ ಪರೀಕ್ಷೆಯನ್ನು ಮಾಡಿಸುವ ವೇಳೆಯಲ್ಲಿ ಪರಿಷ್ಕೃತ ದರ ಪಾವತಿ ಮಾಡಬೇಕಾಗಿದೆ. ವಾಹನ ಸವಾರರು ಪಿಯುಸಿ ಪ್ರಮಾಣ ಪತ್ರದ ದಿನಾಂಕವನ್ನು ಪರಿಶೀಲಿಸಿಕೊಳ್ಳಬೇಕಾಗಿದೆ. ವಾಹನಗಳ ವಾಯು ಮಾಲಿನ್ಯ ಪರೀಕ್ಷಾ ಶುಲ್ಕ ಪರಿಷ್ಕರಣೆಯ ನಂತರ ದ್ವಿಚಕ್ರವಾಹನಗಳ ಮಾಲೀಕರು ಪಿಯುಸಿ ಪ್ರಮಾಣ ಪತ್ರ ಪಡೆಯುವ ವೇಳೆಯಲ್ಲಿ ಈ ಹಿಂದೆ 65 ರೂಪಾಯಿ ಪಾವತಿ ಮಾಡಲಾಗುತ್ತಿತ್ತು.
ಆದರೆ ಇನ್ಮುಂದೆ 80 ರೂಪಾಯಿ ಶುಲ್ಕ ಪಾವತಿಸಬೇಕಾಗಿದೆ. ಆಟೋ ರೀಕ್ಷಾಗಳಿಗೆ ಈ ಹಿಂದೆ 75 ರೂಪಾಯಿ ಇದ್ದು, ಇನ್ಮುಂದೆ 80 ರೂಪಾಯಿ, ಕಾರುಗಳಿಗೆ 115 ರೂಪಾಯಿ ಪಡೆಯಲಾಗುತ್ತಿದ್ದು, ಇಂದಿನಿಂದ 150 ರೂಪಾಯಿ ಹಾಗೂ ಡಿಸೇಲ್ ವಾಹನಗಳಿಗೆ 160 ರೂಪಾಯಿ ದರ ನಿಗದಿ ಮಾಡಲಾಗಿದ್ದು, ಇನ್ಮುಂದೆ 200 ರೂಪಾಯಿ ಹಣ ಪಾವತಿಸುವುದು ಕಡ್ಡಾಯವಾಗಿದೆ.