ಉಡುಪಿ: ಬ್ರಹ್ಮಾವರದ ಗಾಂಧಿನಗರದಲ್ಲಿ ಮಗನೇ ತನ್ನ ಹೆತ್ತ ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆಗೈದಿರುವ ಕ್ರೂರ ಘಟನೆ ನಡೆದಿದೆ. ಮೆಹಬೂಬ್ ಅಲಿ ಹಾಗೂ ಸಂಶದ್ ಬೇಗಂ ಕೊಲೆಯಾದ ದುರ್ದೈವಿಗಳು. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಶಾಹಿದ್ ಆಲಿ ಕೃತ್ಯ ಎಸಗಿದ ಬಳಿಕ ಸ್ವತಃ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾನೆ.
ತಂದೆ ತನಗೆ ಪ್ರತಿದಿನ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದು, ಅದಕ್ಕೆ ತಾಯಿ ಬೆಂಬಲಿಸುತ್ತಿದ್ದರು. ಇದರಿಂದ ಬೇಸತ್ತು ಈ ಕೊಲೆ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಕರೆ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಸೋಕೋ (SOCO) ತಂಡ ಘಟನಾ ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದು, ವೈದ್ಯಕೀಯ ಪರೀಕ್ಷೆಯ ಬಳಿಕ ಆರೋಪಿ ನಶೆಯಲ್ಲಿದ್ದನೇ ಎಂಬುದು ಸ್ಪಷ್ಟವಾಗಲಿದೆ,"ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಇನ್ನೂ ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುದೀರ್ಘ ತನಿಖೆ ಮುಂದುವರಿದಿದೆ.