ಉಡುಪಿ : ಹೋಳಿಗೆ ತರಲೆಂದು ಅಂಗಡಿಗೆ ತೆರಳಿದ್ದ ಪೇಟೆಯಿಂದ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆಯಲ್ಲಿ ದುಷ್ಕರ್ಮಿಗಳ ತಂಡ ಕಾರನ್ನು ಅಡ್ಡಗಟ್ಟಿ ಸೋಡಾ ಬಾಟಲಿಯಿಂದ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ನಡೆದಿದೆ.
ಪೆರ್ಡೂರು ಗ್ರಾಮದ ನಿವಾಸಿ ಸತೀಶ (42 ವರ್ಷ) ಎಂಬುವರೇ ಹಲ್ಲೆಗೆ ಒಳಗಾದವರು. ಆಗಸ್ಟ್ 15ರಂದು ಸಂಜೆ 3:40 ರ ಸುಮಾರಿಗೆ ತಮ್ಮ ಸ್ನೇಹಿತರೊಂದಿಗೆ ಹೆಬ್ರಿಗೆ ತೆರಳಿ ಹೋಳಿಗೆ ಖರೀದಿಸಿ ತಮ್ಮ ಥಾರ್ (Thar) ಕಾರಿನಲ್ಲಿ ಹಿಂತಿರುಗುತ್ತಿದ್ದರು. ಪೆರ್ಡೂರು ಗ್ರಾಮದ ಜೋಗಿಬೆಟ್ಟು ಬಳಿ ತಲುಪಿದ ವೇಳೆಯಲ್ಲಿ ಸುಮಾರು 3-4 ಜನ ಅಪರಿಚಿತರು ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ಸತೀಶ್ ಅವರ ಕಾರನ್ನು ತಡೆದಿದ್ದಾರೆ.
ದುಷ್ಕರ್ಮಿಗಳು ಏಕಾಏಕಿಯಾಗಿ ಕಾರಿನ ಬೊನೆಟ್ ಮೇಲೆ ಬಡಿದು, ಅವಾಚ್ಯ ಶಬ್ದಗಳಿಂದ ಬೈದು ಭೀತಿ ಹುಟ್ಟಿಸಿದ್ದಾರೆ. ಇದರಿಂದ ಗಾಯಗೊಂಡ ಸತೀಶ್ ಮತ್ತು ಅವರ ಸ್ನೇಹಿತರ ಅಪಾಯವನ್ನು ಅರಿತುಕೊಂಡು, ಅಲ್ಲಿಂದ ಕಾರಿನ ಮೂಲಕ ಪೆರ್ಡೂರು ಕಡೆಗೆ ಹೊರಟಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ದುಷ್ಕರ್ಮಿಗಳು KA 19 MC 4004 ನೋಂದಣಿ ಸಂಖ್ಯೆಯ ಕಾರಿನಲ್ಲಿ ಸತೀಶ್ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ ಸಂಜೆ 6:50 ರ ಸುಮಾರಿಗೆ ಪೆರ್ಡೂರು ಪೇಟೆಯ ಬಸ್ ನಿಲ್ದಾಣದ ಬಳಿ ಕಾರಿಗೆ ಮತ್ತೆ ಅಡ್ಡ ಇಟ್ಟಿದ್ದಾರೆ.
ಸತೀಶ್ ಮತ್ತು ಅವರ ಸ್ನೇಹಿತರು ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ. ಕಾರಿನಲ್ಲಿದ್ದ ನಾಲ್ವರು ಆರೋಪಿಗಳು ಕೆಳಗಿಳಿದು ಅವಾಚ್ಯವಾಗಿ ನಿಂದಿಸಿದ್ದಾರೆ. ಈ ವೇಳೆ ಆರೋಪಿಗಳ ಪೈಕಿ ಒಬ್ಬಾತ ಸೋಡಾ ಬಾಟಲಿಯಿಂದ ಸತೀಶ್ ಅವರ ಎಡ ಕಣ್ಣಿನ ಹುಬ್ಬಿಗೆ ಹೊಡೆದಿದ್ದಾನೆ.
ಸತೀಶ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಮೂವರು ಆರೋಪಿಗಳು ಸತೀಶ್ ಅವರ ಸ್ನೇಹಿತ ಶ್ರೀಕಾಂತ್ ತಲೆಗೆ ಸೋಡಾ ಬಾಟಲಿಯಿಂದ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಸತೀಶ್ ಹಾಗೂ ಮತ್ತೊಬ್ಬ ಸ್ನೇಹಿತ ಸತೀಶ್ ಎಂಬವರ ತಲೆ, ಕೆನ್ನೆ ಹಾಗೂ ಎದೆಯ ಭಾಗ ಕೈ ಮತ್ತು ಬಾಟಲಿಯಿಂದ ಮನಬಂದತೆ ಥಳಿಸಿದ್ದಾರೆ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಪೆರ್ಡೂರಿನಲ್ಲಿ ಹೋಳಿಗೆ ತಂದು ಹಿಂತಿರುಗುತ್ತಿದ್ದ ಸತೀಶ್ ಹಾಗೂ ಅವರ ಸ್ನೇಹಿತರ ಮೇಲೆ ದುಷ್ಕರ್ಮಿಗಳ ತಂಡ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.