Kannada News Next

udupi

ಉಡುಪಿ: ಪಶ್ಚಿಮ ಕರಾವಳಿಯಲ್ಲಿ ಕಡಲ ಅಬ್ಬರ – ಮೀನುಗಾರಿಕಾ ಬೋಟ್ ಮುಳುಗಡೆ , 7 ಮಂದಿ ರಕ್ಷಣೆ

ಉಡುಪಿಯ ಪಶ್ಚಿಮ ಕರಾವಳಿ ತೀರದಲ್ಲಿ ಕಡಲ ಅಬ್ಬರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟು ಮುಳುಗಡೆಯಾದ ಭೀಕರ ಘಟನೆ ಸಂಭವಿಸಿದೆ.

By Meghana Pranuth | ಮೇಘನಾ ಪ್ರಣೂತ್‌
Boat submerged by surging waves

ಉಡುಪಿ: ಉಡುಪಿಯ ಪಶ್ಚಿಮ ಕರಾವಳಿ ತೀರದಲ್ಲಿ ಕಡಲ ಅಬ್ಬರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟು ಮುಳುಗಡೆಯಾದ ಭೀಕರ ಘಟನೆ ಸಂಭವಿಸಿದೆ. ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದು, ಸ್ಥಳೀಯ ಮೀನುಗಾರರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಮುದ್ರದಲ್ಲಿ ಪ್ರತಿ ದಿನ ಕಡಲ ಅಬ್ಬರ ಹೆಚ್ಚಾಗುತ್ತಿದ್ದು, ಮೀನುಗಾರರು ತೀವ್ರ ಅಪಾಯಕಾರಿ ಸ್ಥಿತಿಯಲ್ಲೇ ಮೀನುಗಾರಿಕೆ ನಡೆಸುತ್ತಿದ್ದಾರೆ. ಎಂದಿನಂತೆ ಮೀನುಗಾರಿಕೆಗೆ ತೆರಳಿದ್ದ ವೇಳೆ, ಅಲೆಗಳ ಭೋರ್ಸೇತಕ್ಕೆ ಸಿಲುಕಿ ಬೋಟ್ ಮುಳುಗಡೆಯಾಗಿದೆ. ಇದರಲ್ಲಿದ್ದ ಏಳು ಮಂದಿ ಮೀನುಗಾರರು ಸಮುದ್ರ ಪಾಲಾಗುವ ಭೀತಿ ಎದುರಾಗಿತ್ತು.

ಅಪಾಯದ ಸಮಯದಲ್ಲಿ ಕರಾವಳಿ ಕಾವಲು ಪಡೆ (Coastal Security Police) ಪೊಲೀಸರಿಂದ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದರೆ, ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಮೀನುಗಾರರು ತಮ್ಮ ಸಹೋದ್ಯೋಗಿಗಳ ರಕ್ಷಣೆಗೆ ಧಾವಿಸಿದ್ದಾರೆ. ಜೀವದ ಹದನೋಡದೆ ಸಮುದ್ರಕ್ಕೆ ಇಳಿದು ಸಾಹಸಿಕ ಕಾರ್ಯಾಚರಣೆ ನಡೆಸಿ, ಏಳು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ದಂಡೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಸಮುದ್ರದಲ್ಲಿ ಕಡಲ ಕೊರೆತ ಮತ್ತು ಅಲೆಗಳ ರಭಸ ಹೆಚ್ಚುತ್ತಿರುವುದರಿಂದ ಮೀನುಗಾರರು ಜಾಗರೂಕರಾಗಿರಲು ಸೂಚಿಸಲಾಗಿದೆ. ಕಷ್ಟದ ಸಮಯದಲ್ಲಿ ನೆರವಿಗೆ ಬಾರದ ಕರಾವಳಿ ಕಾವಲು ಪಡೆಯ ವಿರುದ್ಧ ಸ್ಥಳೀಯ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.