ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜಾ ಅವರ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರನ್ನು ಬಳಸಿಕೊಂಡು ಡೇವಿಡ್ ಡಿಸೋಜಾ ಹಾಗೂ ಯುಪಿಸಿಎಲ್ (UPCL) ಅಧಿಕಾರಿಗಳಿಗೆ ಇಂಟರ್ನೆಟ್ ಕರೆ ಮಾಡಿದ್ದ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೋಮವಾರ ತಿಳಿಸಿದ್ದಾರೆ.
ತನ್ನ ಸಹೋದರ ಕಿಶೋರ್ ರಾಮ್ ಪೂಜಾರಿಗೆ ಕೆಲಸದ ಗುತ್ತಿಗೆ (ಕಾಂಟ್ರಾಕ್ಟ್) ಕೊಡಿಸುವ ಉದ್ದೇಶದಿಂದ ಈ ಇಂಟರ್ನೆಟ್ ಕರೆಗಳನ್ನು ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ. ಆಗಸ್ಟ್ 7 ರಂದು ಉಡುಪಿ ಜಿಲ್ಲೆಯ ಪಿಲಾರ್ನಲ್ಲಿರುವ ತಮ್ಮ ಕಚೇರಿಯ ಮುಂಭಾಗದಲ್ಲೇ ಡೇವಿಡ್ ಡಿಸೋಜಾ ಅವರ ಹತ್ಯೆ ನಡೆದಿತ್ತು. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳೊಂದಿಗೆ ಈತ 'ಹೇಮಂತ್ ಪೂಜಾರಿ' ಎಂಬ ಹೆಸರಿನಲ್ಲೇ ನೇರ ಸಂಭಾಷಣೆ ನಡೆಸಿರುವುದು ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಸುಪಾರಿ ಪಡೆದ ಶೂಟರ್ಗಳು ಹಾಗೂ ಆರ್ಥಿಕ ನೆರವು ನೀಡಿದ ಹಲವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.