ಕಾಂಗ್ರೆಸ್​ ನಾಯಕ ಮಿಥುನ್​ ರೈ ಶಿಸ್ತು ಉಲ್ಲಂಘನೆ : ನೋಟಿಸ್​ ಜಾರಿ ಮಾಡಿದ ಎಐಸಿಸಿ

ಡಿಸೆಂಬರ್​ 3ರಂದು ಮಂಗಳೂರಿನ ವಿವಿ ಕ್ಯಾಂಪಸ್​ನಲ್ಲಿ ನಡೆದ ನಾರಾಯಣ ಗುರುಗಳು ಹಾಗೂ ಮಹಾತ್ಮ ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮ ಇದೀಗ ಡಿ.ಕೆ ಶಿವಕುಮಾರ್​ ಬೆಂಬಲಿಗರಿಗೆ ಸಂಕಷ್ಟ ತಂದಿದೆ. ಪಕ್ಷದ ಶಿಸ್ತು ಉಲ್ಲಂಘನೆ ಮಾಡಿರುವ ಆರೋಪದ ಅಡಿಯಲ್ಲಿ ಮಿಥುನ್​ ರೈಗೆ ಎಐಸಿಸಿಯಿಂದ ಶೋಕಾಸ್​ ನೋಟಿಸ್​ ನೀಡಲಾಗಿದೆ.
ಈ ಕಾರ್ಯಕ್ರಮಕ್ಕೆ ಹಾಜರಾಗಲೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​​ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ಸಂದರ್ಭದಲ್ಲಿ ಕೆ.ಸಿ ವೇಣುಗೋಪಾಲ್​ ಅವರನ್ನು ಸ್ವಾಗತಿಸಲು ಕಾಂಗ್ರೆಸ್​ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿಥುನ್​ ರೈ ಕೂಡ ಏರ್​ಪೋರ್ಟ್​ಗೆ ತೆರಳಿದ್ದು. ಈ ವೇಳೆ ಅಲ್ಲಿ ಸೇರಿದ್ದ ಭಾರೀ ಸಂಖ್ಯೆಯ ಕಾಂಗ್ರೆಸ್​ ಕಾರ್ಯಕರ್ತರು ಕೆ.ಸಿ ವೇಣುಗೋಪಾಲ್​ ಅವರ ಎದುರಲ್ಲೇ ಡಿ.ಕೆ , ಡಿ.ಕೆ ಎಂದು ಘೋಷಣೆ ಕೂಗುವ ಮೂಲಕ ಕೆ.ಸಿ ವೇಣುಗೋಪಾಲ್​ ಅವರಿಗೆ ಇರಿಸು ಮುರಿಸು ಉಂಟಾಗುವಂತೆ ಮಾಡಿದ್ದಾರೆ.

ಇದನ್ನೂ ಓದಿ: DK Sivakumar fan hydrama: ಮಂಗಳೂರಿನಲ್ಲಿ ಡಿ.ಕೆ ಶಿವಕುಮಾ‌ರ್ ಅಭಿಮಾನಿಗಳ ಹೈಡ್ರಾಮಾ : ಕೆ.ಸಿ ವೇಣುಗೋಪಾಲ್ ಎದುರು ಡಿಕೆಶಿ ಜಯಘೋಷ

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿಥುನ್​ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್​ ಶೋಕಾಸ್​ ನೋಟಿಸ್​ ಜಾರಿ ಮಾಡಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘನೆ ಬಗ್ಗೆ ಕಾರಳ ಕೇಳಿ ಮಿಥುನ್​ ರೈಗೆ ಕಾಂಗ್ರೆಸ್​ ಹೈಕಮಾಂಡ್​ ನೋಟಿಸ್​ ನೀಡಿದೆ.
ಡಿ.ಕೆ ಶಿವಕುಮಾರ್​ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಿಥುನ್​ ರೈ, ರಾಜ್ಯದ ಸಿಎಂ ಸ್ಥಾನ ಡಿ.ಕೆ ಶಿವಕುಮಾರ್​ಗೆ ಲಭಿಸಬೇಕು ಎಂದು ಬೆಂಬಲಿಸುವವರ ಸಾಲಿನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಿಥುನ್​ ರೈ ಬೆಂಬಲಿಗರು ಡಿ.ಕೆ ಎಂದು ಘೋಷಣೆ ಕೂಗಿದ್ದರು.

Exit mobile version