ಮಂಗಳೂರು : ಒಂಟಿ ಮಹಿಳೆಯೋರ್ವರು ತನ್ನ ಕಾರಿನಲ್ಲಿ ಸಾಗುತ್ತಿದ್ದಾಗ ಟಯರ್ ಪಂಕ್ಚರ್ ಆಗಿತ್ತು. ಮಗುವನ್ನು ಹಿಡಿದುಕೊಂಡು ಪಂಕ್ಚರ್ ಹಾಕೋದಕ್ಕೆ ಮಹಿಳೆ ಪರದಾಟ ನಡೆಸಿದ್ದಾರೆ. ಈ ವೇಳೆಯಲ್ಲಿ ಟ್ರಾಫಿಕ್ ಪೊಲೀಸರು ಕಾರಿನ ಟಯರ್ ಬದಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕುಂದಾಪುರ ಮೂಲದ ಮಹಿಳೆ ಮಂಗಳೂರು ನಗರದ ನಾಗುರಿಯಿಂದ ಸಿಟಿ ಕಡೆಗೆ ಹೊರಟಿದ್ದರು. ಈ ವೇಳೆಯಲ್ಲಿ ಪಂಪ್ವೆಲ್ ಸರ್ಕಲ್ ಬಳಿಯಲ್ಲಿ ಕಾರಿನ ಟಯರ್ ಪಂಕ್ಚರ್ ಆಗಿತ್ತು. ಎಳೆಯ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಕಾರಿನ ಟಯರ್ ಬದಲಾಯಿಸೋದಕ್ಕೆ ಪರದಾಡಿದ್ದಾರೆ.
ವಾಹನ ತಪಾಸಣಾ ಕಾರ್ಯ ನಡೆಸುತ್ತಿದ್ದ ಹೈವೆ ಪ್ಯಾಟ್ರಲ್ ವಾಹನದಲ್ಲಿದ್ದ ನಾಗುರಿ ಸಂಚಾರಿ ಠಾಣೆಯ ಎಎಸ್ಐ ಲಸ್ರಾದೋ, ಸಿಬ್ಬಂಧಿ ಮಹೇಶ್ ಹಾಗೂ ಹೋಂ ಗಾರ್ಡ್ ಆಸೀಪ್ ಕೂಡಲೇ ಮಹಿಳೆಯ ನೆರವಿಗೆ ಧಾವಿಸಿದ್ದಾರೆ. ಸ್ಥಳದಲ್ಲಿಯೇ ಕಾರಿನ ಟಯರ್ ಬದಲಾಯಿಸಿ ಮಹಿಳೆಯ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪೊಲೀಸರ ಮಾನವೀಯ ಕಾರ್ಯ ಕ್ಕೆ ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ಸಾರ್ವಜನಿಕ ವಲಯದಿಂದಲೂ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.