‘‘ಶಿಕ್ಷಕರು ಬೀದಿ ನಾಯಿಗಳನ್ನು ಕಾಯಬೇಕಾ’’ : ರಾಜ್ಯ ಸರ್ಕಾರದ ವಿರುದ್ಧ ಬಸವರಾಜ ಹೊರಟ್ಟಿ ಆಕ್ರೋಶ

ಬೀದಿ ನಾಯಿಗಳನ್ನು ನಿಯಂತ್ರಿಸಲು ಸರ್ಕಾರಿ ಶಿಕ್ಷಕರನ್ನು ನೋಡಲ್​ ಅಧಿಕಾರಿಗಳನ್ನಾಗಿ ನೇಮಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿಧಾನಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತದಾನ, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆ ಎಂದು ನಾನಾ ಕೆಲಸಗಳಿಗೆ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಮೊದಲೇ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಈ ನಡುವೆ ಬೀದಿ ನಾಯಿ ಕಾಯುವ ಜವಾಬ್ದಾರಿಯನ್ನೂ ಶಿಕ್ಷಕರಿಗೆ ಹೊರಿಸಿರುವುದು ಅವಮಾನಕರ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೀದಿನಾಯಿಗಳನ್ನು ಕಾಯುವ ಕೆಲಸ ಶಿಕ್ಷಕರಿಗೆ ನೀಡಿರುವುದು ನಿಜಕ್ಕೂ ಶಿಕ್ಷಕ ವೃತ್ತಿಗೆ ಸರ್ಕಾರ ಮಾಡಿರುವ ಅವಮಾನವಾಗಿದೆ. ಅಂದರೆ ಶಿಕ್ಷಕರನ್ನು ಸರ್ಕಾರ ನಾಯಿಗಿಂತ ಕಡೆಯಾಗಿ ನೋಡುತ್ತಿದೆಯೇ ? ಪಾಠ ಮಾಡುವ ಶಿಕ್ಷಕರು ನಾಯಿ ಕಾಯುವ ಕೆಲಸವನ್ನೂ ಮಾಡಬೇಕೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ, ನಮ್ಮ ಮೆಟ್ರೋ ಪ್ರಯಾಣಕ್ಕೆ ಇನ್ಮುಂದೆ ಒಂದೇ ಸ್ಮಾರ್ಟ್ ಕಾರ್ಡ್​ : ಯಾರಿಗೆಲ್ಲ ಲಾಭ ?

ರಾಜ್ಯದಲ್ಲಿ ಮೊದಲೇ ಶಿಕ್ಷಕರ ಕೊರತೆಯಿದೆ. ಭೋಧಕೇತರ ಕೆಲಸಗಳನ್ನೂ ಶಿಕ್ಷಕರ ಮೇಲೆ ಹೇರುತ್ತಿರುವುದರಿಂದ ಶಿಕ್ಷಣದ ಗುಣಮಟ್ಟ ಕೂಡ ಕುಸಿತಗೊಂಡಿದೆ. ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವು ಜನಗಣತಿ ಆರಂಭಿಸುತ್ತಿದ್ದು ಅದರಲ್ಲೂ ಈ ಶಿಕ್ಷಕರೇ ಪಾಲ್ಗೊಳ್ಳಬೇಕಿದೆ. ಈಗ ಬೀದಿ ನಾಯಿ ಕಾಯುವ ಕೆಲಸವನ್ನೂ ಶಿಕ್ಷಕರಿಗೆ ನೀಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಹೊರಟ್ಟಿ ಒತ್ತಾಯಿಸಿದ್ದಾರೆ.

 

 

Exit mobile version