ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ವಿಜಯ್ ನೇತೃತ್ವದಲ್ಲಿ ಟಿವಿಕೆ ಸರಕಾರ ಅಸ್ತಿತ್ವಕ್ಕೆ ಬಂದು 100 ದಿನಗಳು ಕಳೆದಿದೆ. ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಲೇ ನಟ ವಿಜಯ್ ತಮಿಳುನಾಡಿನಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದರು. ಜನಪರ ಕಾಳಜಿಯಿಂದ ಸಿಎಂ ಕೆಲಸ ಮಾಡ್ತಾರೆ ಅನ್ನೋ ಮಾತುಗಳು ಹೊರಬಿದ್ದ ಬೆನ್ನಲ್ಲೇ ಇದೀಗ ಸಿಎಂ ವಿಜಯ್ ದಿನದಲ್ಲಿ ಬರೋಬ್ಬರಿ 20 ಗಂಟೆಗಳ ಕಾಲ ಕೆಲಸ ಮಾಡ್ತಾರೆ ಅನ್ನೋ ಸುದ್ದಿ ಹೊರಬಿದ್ದಿದೆ.
ಸಿಎಂ ವಿಜಯ್ ದಿನ ನಿತ್ಯವೂ 20 ಗಂಟೆ ಕೆಲಸ ಮಾಡ್ತಾರಂತೆ. ಬೆಳಗ್ಗೆ 4 ಗಂಟೆಯಿಂದಲೇ ದಿನಚರಿ ಆರಂಭಿಸುವ ವಿಜಯ್, ಸಚಿವರಿಗೆ ಕರೆ ಮಾಡಿ ಪ್ರತಿಯೊಂದು ಇಲಾಖೆಯ ಕಾರ್ಯವೈಖರಿಯ ಮಾಹಿತಿಯನ್ನು ಪಡೆದುಕೊಳ್ತಾರಂತೆ. ನಮ್ಮ ಸಿಎಂಗೆ ಯಾವುದೇ ಅಹಂಕಾರವಿಲ್ಲ, ಅವರು ಜನರಿಗಾಗಿ ಕೆಲಸ ಮಾಡ್ತಿದ್ದಾರೆ ಎಂದು ಸಚಿವ ಆಧವ್ ಅರ್ಜುನ್ ಸಿಎಂ ವಿಜಯ್ ಅವರ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ನಟ ವಿಜಯ್ ಟಿವಿಕೆ ಪಕ್ಷ ರಚಿಸಿ ತಮಿಳುನಾಡಿನಿಂದ ಸ್ಪರ್ಧೆ ಮಾಡಿದಾಗಲೇ ತಮಿಳುನಾಡಿಗರು ವಿಜಯ್ ಬೆಂಬಲಕ್ಕೆ ನಿಂತಿದ್ದರು. ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದರೂ ಕೂಡ ಸಿಎಂ ಆಗಿ ತಮಿಳುನಾಡು ಸರಕಾರವನ್ನು ಸಮರ್ಥವಾಗಿ ಮುನ್ನೆಡೆಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರನ್ನೂ ಒಗ್ಗೂಡಿಸಿಕೊಂಡು ಮುನ್ನೆಡೆಯುತ್ತಿದ್ದಾರೆ. ಆದರೆ ಈ ನಡುವಲ್ಲೇ ಸಿಎಂ ವಿಜಯ್ ಸರಕಾರದ ಕುರಿತು ಬಿಜೆಪಿ ಗಂಭೀರ ಆರೋಪವೊಂದನ್ನು ಮಾಡಿದೆ.
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಕಚೇರಿಯನ್ನು ಸ್ಥಳಾಂತರಕ್ಕೆ ಮುಂದಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಕಚೇರಿ ಸ್ಥಳಾಂತರದ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.
ಈಗಾಗಲೇ ಕಚೇರಿ ಸ್ಥಳಾಂತರಕ್ಕೆ ಸುಮಾರು 5.5 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಟ್ಟಡದ ನಿರ್ಮಾಣದ ಕಾರ್ಯ ಕೂಡ ನಡೆಯುತತಿದೆ. ಆದರೆ ಈ ಟೆಂಡರ್ನಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಟ್ಟಡದ ಕಾಮಗಾರಿ ಆರಂಭದ ನಂತರದಲ್ಲಿ ಟೆಂಡರ್ ಕರೆಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಸಚಿವ ಆಧವ್ ಅರ್ಜುನ್ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ.