ರಿಯಲ್‌ ಸಿಂಗಂ ತುಕಾರಾಂ ಮುಂಡೆ: 21 ವರ್ಷದಲ್ಲಿ 25 ವರ್ಗಾವಣೆ, ಭ್ರಷ್ಟರ ಪಾಲಿನ ಸಿಂಹಸ್ವಪ್ನ

ಸುಮಾರು 21 ವರ್ಷಗಳ ತಮ್ಮ ಸೇವಾ ಅವಧಿಯಲ್ಲಿ 25ಕ್ಕೂ ಹೆಚ್ಚು ಬಾರಿ ವರ್ಗಾವಣೆ ಹೊಂದಿದ್ದರೂ, ತಮ್ಮ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಅವರು ಒಂದು ಹೆಜ್ಜೆಯೂ ಹಿಂದೆ ಸರಿದಿಲ್ಲ.

By Suma G | ಸುಮಾ ಜಿ.

2 min read

WhatsAppPost
who is tukaram mundhe real singham of india
Photo: Internet

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಹೆಸರು ತುಕಾರಾಂ ಮುಂಡೆ (Tukaram Mundhe). 2005ರ ಬ್ಯಾಚ್‌ನ ಮಹಾರಾಷ್ಟ್ರ ಕೆಡರ್‌ನ ಈ ಐಎಎಸ್ (IAS) ಅಧಿಕಾರಿಯನ್ನು ಸಾರ್ವಜನಿಕರು ಪ್ರೀತಿಯಿಂದ "ರಿಯಲ್ ಸಿಂಗಂ" ಅಂತಲೇ ಕರೆಯುತ್ತಾರೆ. ಸುಮಾರು 21 ವರ್ಷಗಳ ತಮ್ಮ ಸೇವಾ ಅವಧಿಯಲ್ಲಿ 25ಕ್ಕೂ ಹೆಚ್ಚು ಬಾರಿ ವರ್ಗಾವಣೆ ಹೊಂದಿದ್ದರೂ, ತಮ್ಮ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಅವರು ಒಂದು ಹೆಜ್ಜೆಯೂ ಹಿಂದೆ ಸರಿದಿಲ್ಲ.

ಪ್ರಸ್ತುತ ಮಹಾರಾಷ್ಟ್ರದ ಆಹಾರ ಮತ್ತು ಜೌಷಧಿ ಆಡಳಿತ (FDA) ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿರುವ ಅವರು, ತಮ್ಮ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದಾಗಿ ಮತ್ತೆ ದೇಶಾದ್ಯಂತ ಟ್ರೆಂಡಿಂಗ್‌ನಲ್ಲಿದ್ದಾರೆ.

ಪ್ರಸ್ತುತ ಟ್ರೆಂಡಿಂಗ್‌ನಲ್ಲೇಕಿದ್ದಾರೆ?

ಎಫ್‌ಡಿಎ (FDA) ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ತುಕಾರಾಂ ಮುಂಡೆ ಅವರು ಆಹಾರ ಮಾಫಿಯಾ ಮತ್ತು ಕಲಬೆರಕೆ ಜಾಲದ ವಿರುದ್ಧ ದಂಡಯಾತ್ರೆ ಆರಂಭಿಸಿದ್ದಾರೆ:

  • 1,100ಕ್ಕೂ ಹೆಚ್ಚು ದಾಳಿಗಳು: ರಾಜ್ಯದಾದ್ಯಂತ ಹೋಟೆಲ್‌ಗಳು, ಬೇಕರಿಗಳು ಹಾಗೂ ಆಹಾರ ಸಂಸ್ಕರಣಾ ಘಟಕಗಳ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸಲಾಗಿದೆ.

  • ₹50 ಕೋಟಿ ಮೌಲ್ಯದ ಸರಕು ಜಪ್ತಿ: ಕಲಬೆರಕೆ ಹಾಗೂ ನೈರ್ಮಲ್ಯವಿಲ್ಲದ ಅಸುರಕ್ಷಿತ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

  • 56 ಪ್ರಸಿದ್ಧ ಹೋಟೆಲ್‌ಗಳ ಪರವಾನಗಿ ರದ್ದು: ಎಷ್ಟೇ ಪ್ರಭಾವಿ ಅಥವಾ ಖ್ಯಾತ ಹೋಟೆಲ್ ಆಗಿದ್ದರೂ ನೈರ್ಮಲ್ಯ ನಿಯಮ ಉಲ್ಲಂಘಿಸಿದ್ದರೆ ದಾಕ್ಷಿಣ್ಯವಿಲ್ಲದೆ ಲೈಸೆನ್ಸ್ ಅಮಾನತುಗೊಳಿಸಿದ್ದಾರೆ.

  • ಶಾಲಾ ಆವರಣದಲ್ಲಿ ಜಂಕ್ ಫುಡ್ ಬ್ಯಾನ್: ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ಹಾಗೂ ತಂಪಾದ ಪಾನೀಯಗಳ ಮಾರಾಟವನ್ನು ನಿಷೇಧಿಸಿದ್ದಾರೆ.

ಬಡತನದಿಂದ ಯುಪಿಎಸ್‌ಸಿವರೆಗೆ : ಕಠಿಣ ಹಾದಿ

ತುಕಾರಾಂ ಮುಂಡೆ ಅವರ ಯಶಸ್ಸಿನ ಹಾದಿ ಸುಲಭವಾಗಿರಲಿಲ್ಲ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಬಡ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಅವರು, ತೀವ್ರ ಆರ್ಥಿಕ ಸಂಕಷ್ಟಗಳ ನಡುವೆಯೇ ಬೆಳೆದರು. ಸಮಾಜಕ್ಕೆ ಮತ್ತು ದೇಶಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಬೇಕೆಂಬ ಬಲವಾದ ಸಂಕಲ್ಪದಿಂದ ಕಷ್ಟಪಟ್ಟು ಓದಿ, ಯುಪಿಎಸ್‌ಸಿ (UPSC) ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2005ರಲ್ಲಿ ಐಎಎಸ್ ಅಧಿಕಾರಿಯಾದರು.

ಹೋದ ಕಡೆಯಲ್ಲೆಲ್ಲಾ ಜನಪರ ಕ್ರಾಂತಿ!

"ನನ್ನ ಕೆಲಸ ಜನರಿಗೆ ಹಾಗೂ ಕಾನೂನಿಗೆ ಸೇವೆ ಮಾಡುವುದೇ ಹೊರತು, ರಾಜಕಾರಣಿಗಳ ಅಥವಾ ಮಾಫಿಯಾಗಳ ಹಿತಾಸಕ್ತಿ ಕಾಯುವುದಲ್ಲ." — ತುಕಾರಾಂ ಮುಂಡೆ

  • ಸೋಲಾಪುರ ಡಿಸ್ಟ್ರಿಕ್ಟ್ ಕಲೆಕ್ಟರ್: ನೀರಿಲ್ಲದೆ ತಲಮಲಗುತ್ತಿದ್ದ ನೂರಾರು ಹಳ್ಳಿಗಳನ್ನು 'ಟ್ಯಾಂಕರ್ ಮುಕ್ತ' ಮಾಡುವಲ್ಲಿ ಯಶಸ್ವಿಯಾದರು. ಇವರ ಈ ಸಾಧನೆಗೆ 2016ರಲ್ಲಿ 'ಅತ್ಯುತ್ತಮ ಕಲೆಕ್ಟರ್' ಪ್ರಶಸ್ತಿ ಲಭಿಸಿತು.

  • ನವಿ ಮುಂಬೈ & ನಾಗಪುರ ಪಾಲಿಕೆ: ಅಕ್ರಮ ಕಟ್ಟಡಗಳ ತೆರವು, ತೆರಿಗೆ ವಂಚಕರ ವಿರುದ್ಧ ಶಿಸ್ತುಕ್ರಮ ಹಾಗೂ ಸಾರ್ವಜನಿಕರ ಕುಂದುಕೊರತೆ ಆಲಿಸಲು 'ನೇರ ಭೇಟಿ ಸಮಯ' ನಿಗದಿಪಡಿಸಿ ಸಾರ್ವಜನಿಕರ ನೆಚ್ಚಿನ ಅಧಿಕಾರಿಯಾದರು.

  • ಸಾರಿಗೆ ಇಲಾಖೆ: ಆಟೋ ಮತ್ತು ಬಸ್ ಮಾಫಿಯಾಗಳ ಅನಧಿಕೃತ ದಂಧೆಗೆ ಬ್ರೇಕ್ ಹಾಕಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿದರು.

21 ವರ್ಷದಲ್ಲಿ 25 ವರ್ಗಾವಣೆ: ಏಕೆ?

ನಿಯಮಗಳ ಪ್ರಕಾರವೇ ನಡೆಯುವ ಮತ್ತು ಭ್ರಷ್ಟಾಚಾರಕ್ಕೆ ಎಂದಿಗೂ ಸೊಪ್ಪು ಹಾಕದ ಅಧಿಕಾರಿಗಳಿಗೆ ರಾಜಕೀಯ ಹಾಗೂ ಮಾಫಿಯಾಗಳ ಒತ್ತಡ ಇದ್ದೇ ಇರುತ್ತದೆ. ತುಕಾರಾಂ ಮುಂಡೆ ಅವರು ಯಾವುದೇ ಬೆದರಿಕೆ ಅಥವಾ ರಾಜಕೀಯ ಒತ್ತಡಕ್ಕೆ ಮಣಿಯದ ಕಾರಣ, ರಾಜಕಾರಣಿಗಳು ಇವರನ್ನು ಮೇಲಿಂದ ಮೇಲೆ ವರ್ಗಾವಣೆ ಮಾಡುತ್ತಾ ಬಂದಿದ್ದಾರೆ.

ಆದರೆ ಈ ವರ್ಗಾವಣೆಗಳನ್ನು ಅವರು ಎಂದಿಗೂ ಶಿಕ್ಷೆ ಎಂದು ಭಾವಿಸಲಿಲ್ಲ. "ಪ್ರತಿಯೊಂದು ವರ್ಗಾವಣೆಯೂ ನನಗೆ ಹೊಸ ಕ್ಷೇತ್ರದಲ್ಲಿ ಜನಸೇವೆ ಮಾಡಲು ಸಿಕ್ಕ ದೊಡ್ಡ ಅವಕಾಶ" ಎಂಬುದು ಅವರ ಸಕಾರಾತ್ಮಕ ಧೋರಣೆ.

ಸಮಾಜಕ್ಕೆ ಸಿಗುವ ಸಂದೇಶ

ಇಂದಿನ ಆಡಳಿತ ವ್ಯವಸ್ಥೆಯಲ್ಲಿ ನಿಸ್ವಾರ್ಥ, ಧೈರ್ಯವಂತ ಮತ್ತು ಬದ್ಧತೆಯುಳ್ಳ ಅಧಿಕಾರಿ ಹೇಗೆ ಕೆಲಸ ಮಾಡಬೇಕು ಎನ್ನುವುದಕ್ಕೆ ತುಕಾರಾಂ ಮುಂಡೆ ಸೂಕ್ತ ಉದಾಹರಣೆ. ರಾಜಕೀಯ ಮೇಲಾಟಗಳು ಹಾಗೂ ಬೆದರಿಕೆಗಳಿಗೆ ಜಗ್ಗದೆ ಸಾರ್ವಜನಿಕ ಹಿತಾಸಕ್ತಿಯೇ ಅಂತಿಮ ಎಂದು ಹೋರಾಡುತ್ತಿರುವ ಈ 'ರಿಯಲ್ ಸಿಂಗಂ', ದೇಶದ ಕೋಟ್ಯಂತರ ಯುವಜನರಿಗೆ ಮತ್ತು ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ನಿಜವಾದ ಪ್ರೇರಣೆ.

Topics

ಸಂಬಂಧಿತ ಸುದ್ದಿಗಳು