ಬರಪೀಡಿತ ತಾಲೂಕುಗಳ ರೈತರಿಗೆ ಬಿಗ್ ರಿಲೀಫ್ : ಕೃಷಿ ಸಾಲ ಮರುಪಾವತಿ ಅವಧಿ 60 ತಿಂಗಳವರೆಗೆ ವಿಸ್ತರಣೆ
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆದ ಸಾಲಗಳು ಸೇರಿದಂತೆ ತೋಟಗಾರಿಕೆ, ಹೈನುಗಾರಿಕೆ ಹಾಗೂ ಮೀನುಗಾರಿಕೆಯಂತಹ ಕೃಷಿ ಉಪಚಟುವಟಿಕೆಗಳಿಗಾಗಿ ಪಡೆದ ಎಲ್ಲಾ ಸಾಲಗಳಿಗೂ ಈ ನಿಯಮ ಅನ್ವಯವಾಗಲಿದೆ.
ಪ್ರಸಕ್ತ ಸಾಲಿನಲ್ಲಿ ಮಳೆಯ ಅಭಾವದಿಂದಾಗಿ ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿರುವ ರಾಜ್ಯದ ರೈತರ ಹಿತರಕ್ಷಣೆಗೆ ಬ್ಯಾಂಕಿಂಗ್ ವಲಯ ಮುಂದಾಗಿದೆ. ರಾಜ್ಯ ಸರ್ಕಾರ ಗುರುತಿಸಿರುವ ಒಟ್ಟು 101 ಬರಪೀಡಿತ ತಾಲೂಕುಗಳ ಕೃಷಿಕರ ನೆರವಿಗಾಗಿ ಕೃಷಿ ಸಾಲಗಳ ಮರುಪಾವತಿ ನಿಯಮದಲ್ಲಿ ಭಾರಿ ಸಡಿಲಿಕೆ ಮಾಡಲಾಗಿದ್ದು, ಸಾಲ ತೀರಿಸುವ ಅವಧಿಯನ್ನು ಗರಿಷ್ಠ 5 ವರ್ಷಗಳವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ.
ರಾಜ್ಯ ಮಟ್ಟದ ಬ್ಯಾಂಕರ್ಗಳ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಬರಗಾಲದ ಹೊಡೆತಕ್ಕೆ ಸಿಲುಕಿರುವ ಕೃಷಿಕರಿಗೆ ತಕ್ಷಣದಿಂದಲೇ ಅನ್ವಯವಾಗುವಂತೆ ಒಂದು ವರ್ಷದ ಅವಧಿಗೆ ಸಾಲದ ಕಂತು ಪಾವತಿಯಿಂದ ವಿನಾಯಿತಿ ಘೋಷಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆದ ಸಾಲಗಳು ಸೇರಿದಂತೆ ತೋಟಗಾರಿಕೆ, ಹೈನುಗಾರಿಕೆ ಹಾಗೂ ಮೀನುಗಾರಿಕೆಯಂತಹ ಕೃಷಿ ಉಪಚಟುವಟಿಕೆಗಳಿಗಾಗಿ ಪಡೆದ ಎಲ್ಲಾ ಸಾಲಗಳಿಗೂ ಈ ನಿಯಮ ಅನ್ವಯವಾಗಲಿದೆ. ತೀವ್ರ ಬರ ಪೀಡಿತವಾಗಿರುವ 89 ತಾಲೂಕುಗಳ ರೈತರಿಗೆ 5 ವರ್ಷ ಹಾಗೂ ಸಾಧಾರಣ ಬರವಿರುವ 12 ತಾಲೂಕುಗಳ ರೈತರಿಗೆ 3 ವರ್ಷಗಳ ಕಾಲಾವಕಾಶ ಸಿಗಲಿದೆ.
ಸದ್ಯದ ಪರಿಸ್ಥಿತಿಯಲ್ಲಿ ರೈತರು ಎದುರಿಸುತ್ತಿರುವ ಕಷ್ಟಗಳನ್ನು ಮನಗಂಡು, ಯಾವುದೇ ಕಾರಣಕ್ಕೂ ಬ್ಯಾಂಕುಗಳು ಸಾಲ ವಸೂಲಾತಿಗಾಗಿ ರೈತರಿಗೆ ಕಿರುಕುಳ ನೀಡಬಾರದು ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಬ್ಯಾಂಕುಗಳ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ, ಮುಂಬರುವ ದಿನಗಳಲ್ಲಿ ಕೃಷಿ ಚಟುವಟಿಕೆಗಳನ್ನು ಪುನರಾರಂಭಿಸಲು ಇಚ್ಛಿಸುವ ರೈತರಿಗೆ ಹೊಸದಾಗಿ ಬೆಳೆ ಸಾಲ ನೀಡಲು ಕೂಡ ಬ್ಯಾಂಕುಗಳು ಒಪ್ಪಿಗೆ ಸೂಚಿಸಿವೆ. ಸರ್ಕಾರದ ಈ ದಿಟ್ಟ ನಿರ್ಧಾರವು ಗ್ರಾಮೀಣ ಭಾಗದ ಲಕ್ಷಾಂತರ ರೈತ ಕುಟುಂಬಗಳಿಗೆ ದೊಡ್ಡ ಆರ್ಥಿಕ ನೆಮ್ಮದಿ ತಂದಿದೆ.
Topics
ಸಂಬಂಧಿತ ಸುದ್ದಿಗಳು
karnataka
ರಾಜ್ಯದಲ್ಲಿ ಬದಲಾದ ಹವಾಮಾನ : ಬೆಂಗಳೂರು, ಮಲೆನಾಡು ಸೇರಿ ವಿವಿಧ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಮುನ್ಸೂಚನೆ
karnataka
ವರುಣನ ದ್ವಿತೀಯ ಇನ್ನಿಂಗ್ಸ್ : ಸೆಪ್ಟೆಂಬರ್ 19 ರಿಂದ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ
karnataka
ಕಿಚನ್ ಬಜೆಟ್ ಏರುಪೇರು : ತಲೆತಿರುಗಿಸುತ್ತೆ ಅಕ್ಕಿ ಬೆಲೆ!
karnataka

