ವಿಜಯಪುರ:ಭೂತನಾಳ ಕೆರೆಯಲ್ಲಿ ತೇಲಿಬಂತು ಒಂದೇ ಕುಟುಂಬದ 6 ಶವಗಳು!

ವಿಜಯಪುರ: ನಗರದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಬುಧವಾರ ಬೆಳಗಿನ ಜಾವ ಘೋರ ದುರಂತವೊಂದು ಬೆಳಕಿಗೆ ಬಂದಿದೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Bhootanala Lake Dead Bodies
Bhootanala Lake Dead Bodies

ವಿಜಯಪುರ: ನಗರದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಬುಧವಾರ ಬೆಳಗಿನ ಜಾವ ಘೋರ ದುರಂತವೊಂದು ಬೆಳಕಿಗೆ ಬಂದಿದೆ. ಕೆರೆಯ ನೀರಿನಲ್ಲಿ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿ ಒಟ್ಟು ಆರು ಮೃತದೇಹಗಳು ತೇಲುತ್ತಿರುವುದು ಪತ್ತೆಯಾಗಿದೆ.

ಮೃತ ದುರ್ದೈವಿಗಳನ್ನು ಶೋಭಾ ಮಲಕಾರಿ ಜಾಲಗೇರಿ (45), ಅವರ ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್ (ಮೂಗ ಬಾಲಕ-10), ವಿಕಾಸ (5) ಹಾಗೂ ಸಾನಿಕಾ (7) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಶೋಭಾ ಜಾಲಗೇರಿ ಅವರು ಪತಿ ಮಲಕಾರಿ ಭೀಮರಾಯ ಜಾಲಗೇರಿ ಜೊತೆ ಗಲಾಟೆ ಮಾಡಿಕೊಂಡು, ಐವರು ಮಕ್ಕಳೊಂದಿಗೆ ಮನೆಗೆ ತಿಳಿಸದೆ ಹೊರಬಂದಿದ್ದರು ಎನ್ನಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದ ತಾಯಿ, ತಮ್ಮ ಐದೂ ಮಕ್ಕಳ ಜೊತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ ನಿಂಬರಗಿ ಹಾಗೂ ಆದರ್ಶ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದು ಕೇವಲ ಕೌಟುಂಬಿಕ ಕಲಹದ ಆತ್ಮಹತ್ಯೆಯೋ? ಅಥವಾ ಮಕ್ಕಳು ಆಕಸ್ಮಿಕವಾಗಿ ನೀರಿಗೆ ಬಿದ್ದಾಗ ರಕ್ಷಿಸಲು ಹೋಗಿ ದುರಂತ ಸಂಭವಿಸಿದೆಯೋ? ಇಲ್ಲವೇ ಬೇರೆನಾದರೂ ಕೃತ್ಯ ನಡೆದಿದೆಯೋ? ಎಂಬ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕಾಡುತ್ತಿವೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಸುದೀರ್ಘ ತನಿಖೆಯ ನಂತರವಷ್ಟೇ ಈ ಭೀಕರ ಘಟನೆಯ ನೈಜ ಸತ್ಯಾಂಶ ಹೊರಬರಲಿದೆ. ಇನ್ನೂ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Topics

ಸಂಬಂಧಿತ ಸುದ್ದಿಗಳು