ನೇಪಾಳದಲ್ಲಿ ಭೀಕರ ಜಲಪ್ರಳಯ: 300 ಭಾರತೀಯ ಯಾತ್ರಿಕರು ನಾಪತ್ತೆ, ಸಾವಿನ ಸಂಖ್ಯೆ 160ಕ್ಕೆ ಏರಿಕೆ!

ನೇಪಾಳದ ರಸುವಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ಇಡೀ ಜನಜೀವನ ತತ್ತರಿಸಿದೆ

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Nepal Flood
Nepal Flood

ಕಠ್ಮಂಡು: ನೇಪಾಳದ ರಸುವಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ ಇಡೀ ಜನಜೀವನ ತತ್ತರಿಸಿದೆ. ಈ ನೈಸರ್ಗಿಕ ವಿಕೋಪದಲ್ಲಿ ಇದುವರೆಗೆ 160 ಮಂದಿ ಸಾವನ್ನಪ್ಪಿದ್ದು, ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ 300 ಭಾರತೀಯರು ಸೇರಿದಂತೆ ಸುಮಾರು 500 ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ. ಈ ಮಾಹಿತಿಯನ್ನು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ‘ಖಾಸಗಿ ವಾಹಿನಿಯ ಶೃಂಗಸಭೆ’ಯಲ್ಲಿ ತಿಳಿಸಿದ್ದಾರೆ.

ಟಿಬೆಟ್ ಗಡಿ ಮಾರ್ಗದಲ್ಲಿದ್ದ ಯಾತ್ರಿಕರ ಮೊಬೈಲ್ ನೆಟ್‌ವರ್ಕ್ ಸಂಪೂರ್ಣ ಕಡಿತಗೊಂಡಿದೆ. ಆಪ್ಟಿಕಲ್ ಫೈಬರ್ ಮತ್ತು ಟವರ್‌ಗಳು ಕೊಚ್ಚಿಹೋಗಿರುವುದರಿಂದ ನೇಪಾಳ ಸೇನೆಯು ಸ್ಯಾಟಲೈಟ್ (ಉಪಗ್ರಹ) ಫೋನ್‌ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ನಾಪತ್ತೆಯಾಗಿರುವ ಭಾರತೀಯರನ್ನು ಪತ್ತೆಹಚ್ಚಲು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಪ್ರತಿಯೊಬ್ಬ ವಿದೇಶಿ ಪ್ರಜೆಯ ರಕ್ಷಣೆಗೆ ನೇಪಾಳ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ವಿಪತ್ತು ಸಂಭವಿಸಿದ ತಕ್ಷಣವೇ 10 ಟನ್ ತುರ್ತು ಪರಿಹಾರ ಸಾಮಗ್ರಿಗಳು ಹಾಗೂ ವೈದ್ಯಕೀಯ ನೆರವು ನೀಡಿದ ಭಾರತ ಸರ್ಕಾರಕ್ಕೆ ನೇಪಾಳ ಧನ್ಯವಾದ ಸಮರ್ಪಿಸಿದೆ.

ಪ್ರವಾಹವು ಗಡಿ ಕಣಿವೆ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು, ಕಠ್ಮಂಡು, ಪೋಖ್ರಾ ಮತ್ತು ಮೌಂಟ್ ಎವರೆಸ್ಟ್ ವಲಯಗಳು ಸಂಪೂರ್ಣ ಸುರಕ್ಷಿತವಾಗಿವೆ. ಹೀಗಾಗಿ ಪ್ರವಾಸಿಗರು ನೇಪಾಳ ಪ್ರವಾಸ ರದ್ದುಗೊಳಿಸಬಾರದು ಎಂದು ಸಚಿವರು ಮನವಿ ಮಾಡಿದ್ದಾರೆ.

Topics

ಸಂಬಂಧಿತ ಸುದ್ದಿಗಳು