ಬೆಂಗಳೂರು : ಹೋಂ ಕ್ವಾರೆಂಟೈನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಡ್ರೋನ್ ಪ್ರತಾಪ್ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನಲ್ಲಿ ಇರುವುದನ್ನ ಖಚಿತ ಮಾಹಿತಿ ಪಡೆದ ತಲಘಟ್ಟಪುರ ಪೊಲೀಸರು, ಮಂಡಿಮೊಹಲ್ಲಾದ ಬಳಿ ಡ್ರೋನ್ ಪ್ರತಾಪ್ ವಶಕ್ಕೆ ಪಡೆದಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಕರೆತಂದಿರುವ ಬಿಬಿಎಂಪಿ ಅಧಿಕಾರಿಗಳು ಪ್ರತಾಪ್ ನನ್ನು ಸಾಂಸ್ಥಿಕ ಕ್ವಾರೆಂಟೈನ್ ಗೆ ಒಳಪಡಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಡ್ರೋನ್ ಪ್ರತಾಪ್ ನನ್ನು ಬಿಬಿಎಂಪಿ ಅಧಿಕಾರಿಗಳು ಆತ ವಾಸವಿದ್ದ ಅಂಜನಾಪುರದ ಎಸ್ಎಸ್ಎಂಐಎಂಜಿ ವಿಂಡ್ ಪಾಲ್ ಅಪಾರ್ಟ್ಮೆಂಟ್ನಲ್ಲಿ ಕ್ವಾರಂಟೈನ್ ಗೆ ಒಳಪಡಿಸಿದ್ದರು. ಆದರೆ ಪ್ರತಾಪ್ ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಜುಲೈ 16ರಂದು ಅಪಾರ್ಟ್ ಮೆಂಟ್ ನಿಂದ ಹೊರಗೆ ಬಂದು ಖಾಸಗಿ ವಾಹಿಯಲ್ಲಿ ಸಂದರ್ಶನವೊಂದಲ್ಲಿ ಭಾಗಿಯಾಗಿದ್ದ. ಅಲ್ಲದೇ ಸಂದರ್ಶನದಲ್ಲಿ ತಾನು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿರುವುದಾಗಿಯೂ ಹೇಳಿಕೊಂಡಿದ್ದ. ಹೀಗಾಗಿ ಪಶುವೈದ್ಯ ಹಾಗೂ ವಿಧಿ ವಿಜ್ಞಾನ ತಜ್ಞ ಡಾ.ಎಚ್.ಎಸ್.ಪ್ರಯಾಗ್ ತಲಘಟ್ಟಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪ್ರತಾಪ್ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಡ್ರೋನ್ ಪ್ರತಾಪ್ ತಲೆಮರೆಸಿಕೊಂಡಿದ್ದ. ಡ್ರೋನ್ ಪ್ರತಾಪ್ ಪತ್ತೆಗೆ ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿಕೊಂಡು ಕೊನೆಗೂ ಪ್ರತಾಪ್ ಇರುವಿಕೆಯನ್ನು ಪತ್ತೆ ಹಚ್ಚಿದ್ದಾರೆ.
ಮಂಡ್ಯ, ಚಿಕ್ಕಮಗಳೂರಲ್ಲಿ ಉಳಿದಿರಬಹುದೆಂಬ ನಿಟ್ಟಿನಲ್ಲಿ ಹುಡುಕಾಟವನ್ನು ನಡೆಸಿದ್ದ ಪೊಲೀಸರು ಕೊನೆಗೂ ಪ್ರತಾಪ್ ಮೈಸೂರಿನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ಆರಂಭದಲ್ಲಿ ತಾನು ಮೈಸೂರಿನಲ್ಲಿಯೇ ಕ್ವಾರಂಟೈನ್ ಗೆ ಒಳಪಡುವುದಾಗಿಯೂ ಹೇಳಿದ್ದರೂ ಕೂಡ ಬಿಬಿಎಂಪಿ ಅಧಿಕಾರಿಗಳು ಅವಕಾಶವನ್ನು ನೀಡಿಲ್ಲ.
ಕೊನೆಗೆ ಪ್ರತಾಪ್ ನನ್ನು ಬಂಧಿಸಿ ಮೈಸೂರಿನಿಂದ ಬೆಂಗಳೂರಿಗೆ ಕರೆತಂದು, ಕೆಂಗೇರಿ ಬಳಿಯ ಖಾಸಗಿ ಹೋಟೆಲ್ನಲ್ಲಿ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಹೋಮ್ ಕ್ವಾರಂಟೈನ್ ಅವಧಿ ಮುಗಿದ ನಂತರದಲ್ಲಿ ಪೊಲೀಸರು ಡ್ರೋನ್ ಪ್ರತಾಪ್ ನನ್ನು ಕಾನೂನು ಕ್ರಮಕೈಗೊಳ್ಳುವ ಸಾಧ್ಯತೆಯಿದೆ.