
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ವಿದ್ಯಾಗಮ ಯೋಜನೆಯ ತರಗತಿಗಳನ್ನು ಯಾವುದೇ ಕಾರಣಕ್ಕೂ ಶಾಲೆ ಹಾಗೂ ಶಾಲೆಯ ಆವರಣದಲ್ಲಿ ನಡೆಸುವಂತಿಲ್ಲ. ಒಂದೊಮ್ಮೆ ವಿದ್ಯಾಗಮ ಯೋಜನಯ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದ್ರೆ ಅಂತಹ ಶಿಕ್ಷಕರು ಅಥವಾ ಮುಖ್ಯ ಶಿಕ್ಷಕರ ವಿರುದ್ದ ಶಿಸ್ತುಕ್ರಮಕೈಗೊಳ್ಳುವಂತೆ ಹಾಸನ ಡಿಡಿಪಿಐ ಖಡಕ್ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಬಹುತೇಕ ಶಾಲೆಗಳಲ್ಲಿ ವಿದ್ಯಾಗಮ ಯೋಜನೆಯನ್ನು ಶಾಲೆಯಲ್ಲಿ ಹಾಗೂ ಶಾಲಾ ಆವರಣದಲ್ಲಿ ನಡೆಸಲಾಗುತ್ತಿದೆ. ಮಾತ್ರವಲ್ಲ ವಿದ್ಯಾಗಮ ಯೋಜನೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಪಾಲನೆ ಮಾಡುತ್ತಿಲ್ಲ. ಅಲ್ಲದೇ ಮಾಸ್ಕ್ ಬಳಸುತ್ತಿಲ್ಲವೆಂಬ ಕುರಿತು ನಿಮ್ಮ news next “ವಿದ್ಯಾಗಮ ಹೆಸರಲ್ಲಿ ಶಿಕ್ಷಣ ಇಲಾಖೆಯ ಮಹಾ ಎಡವಟ್ಟು : ಮಕ್ಕಳಿಗೆ ಕೊರೊನಾ ಹರಡಿಸುತ್ತಿದ್ಯಾ ಇಲಾಖೆ” ಅನ್ನುವ ಶೀರ್ಷಿಕೆಯಡಿಯಲ್ಲಿ ಅಗಸ್ಟ್ 20ರಂದು ವಿಸ್ತ್ರತ ವರದಿಯನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳ ಮುಂದಿನ ಕಲಿಕಾ ನಿರಂತರತೆಗೆ ಪರಿಣಾಮ ಬೀರಬಾರದೆಂಬ ನಿಟ್ಟಿನಲ್ಲಿ ವಿದ್ಯಾಗಮ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಸುತ್ತೋಲೆಯಂತೆ ಶಾಲೆಯ ಒಳಗೆ ಹಾಗೂ ಶಾಲೆಯ ಆವರಣದಲ್ಲಿ ವಿದ್ಯಾಗಮ ಕಾರ್ಯಕ್ರಮ ನಡೆಸದಂತೆ ಆದೇಶಿಸಲಾಗಿದೆ,

ಇನ್ನು ಮಾರ್ಗದರ್ಶಿ ಶಿಕ್ಷಕರು ತರಗತಿ ವಿಧಗಳಂತೆ ಸಮುದಾಯ ಭವನ/ಧಾರ್ಮಿಕ ಸ್ಥಳ/ಸೂಕ್ತ ಮರದ ನೆರಳಿನಲ್ಲಿ ದೈಹಿಕ ಅಂತರದಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಸೂಚನೆಯನ್ನು ನೀಡಿದ್ದಾರೆ. ಒಂದೊಮ್ಮೆ ಆದೇಶವನ್ನು ಉಲ್ಲಂಘಟನೆ ಮಾಡಿದವರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

