ಹೈದರಾಬಾದಿನ ನಾರಾಯಣ ರಾಯರು ಮತ್ತು ಕಮಲಾಬಾಯಿಯವರು ಜನ್ಮವಿತ್ತ ಮಹಾ ಪುರುಷರೇ ಶ್ರೀಧರ ಸ್ವಾಮಿಗಳು. 1908 ಡಿಸೆಂಬರ್ 7 ರಂದು ದತ್ತಜಯಂತಿಯಂದು ಈಗಿನ ಕಲ್ಬುರ್ಗಿ ಜಿಲ್ಲೆಯ ಲಾಡಚಿಂಚೋಳಿ ಗ್ರಾಮದಲ್ಲಿ ಶ್ರೀಧರ ಸ್ವಾಮಿಗಳ (Sridhara Swami ) ಜನನವಾಯಿತು. ಧಾರ್ಮಿಕತೆಗೆ ಉದಾಹರಣೆಯಾಗಿದ್ದ ಕುಟುಂಬದಲ್ಲಿ ಜನಿಸಿದ್ದ ಇವರು ತಮ್ಮ 12ನೇ ವಯಸ್ಸಿನಲ್ಲೆ ತಂದೆ- ತಾಯಿ ಕಳೆದುಕೊಂಡು ಅನಾಥರಾಗುವ ದುರ್ವಿಧಿ ಒದಗಿತು.

ಪರಿಸ್ಥಿತಿಯನ್ನು ಋಣಾತ್ಮಕವಾಗಿ ಸ್ವೀಕರಿಸದೆ ಶ್ರೀಗಳು ತಮ್ಮ ವಿಧ್ಯಾಭಾಸದೊಡನೆ ಧಾರ್ಮಿಕತೆ, ಸನಾತನ ಧರ್ಮ, ಭಗವದ್ಗೀತೆ, ಹರಿಕಥೆಗಳ ಪ್ರವಚನಗಳಿಂದ ಜನರ ಮನಗಳಲ್ಲಿ ನೆಲೆಸ ತೊಡಗಿದ್ದರು. ಲೋಕಕಲ್ಯಾಣಕ್ಕಾಗಿ ತಪಸ್ಸು ಮಾಡಬೇಕೆಂದು ಭಾವಿಸಿದ್ದ ಶ್ರೀಗಳು ತಮ್ಮ ವಿಧ್ಯಾಭಾಸದೊಡನೆ ತಪಸ್ಸಿನೊಡನೆ ಗಮನ ನೀಡಲೆಂದು ಪುಣೆಯಲ್ಲಿದ್ದ ಉಚಿತ ವಿದ್ಯಾರ್ಥಿ ಗೃಹಕ್ಕೆ ಧಾವಿಸಿದರು. ಅಲ್ಲಿ ತಮ್ಮ ಆಚಾರ ಮತ್ತೆಸ್ನೇಹ ಸ್ವಭಾವದಿಂದ “ಶ್ರೀಧರಸ್ವಾಮಿ” (Sridhara Swami )ಎಂದೆನಿಸಿಕೊಂಡರು. ಏಕಾಂತತೆಯ ಕೊರತೆಯಿಂದಾಗಿ ವಿದ್ಯಾರ್ಥಿ ಗೃಹ ತ್ಯಜಿಸಿ ಬಾಡಿಗೆಯ ಕೋಣೆ ಮಾಡಿಕೊಂಡು ಜೀವಿಸತೊಡಗಿದರು. ಆಹಾರಕ್ಕಾಗಿ ಮಧುಕರೀವೃತ್ತಿ (ಭಿಕ್ಷಾಟನೆ) ಅವಲಂಬಿಸಿದರು. ಎಲ್ಲವನ್ನೂ ತ್ಯಜಿಸಿ ತಪಸ್ಸಿಗೆ ಹೋಗಬೇಕೆಂಬ ಇಚ್ಛೆ ಪ್ರಬಲವಾಯಿತು.

ನೆರೆಯವರಾದ ಪಳಣಿಕರಿಂದ ಸಲಹೆ ಪಡೆದು ಸಜ್ಜನಗಡದ ಶ್ರೀ ಸಮರ್ಥ ರಾಮದಾಸ ಸ್ವಾಮಿಗಳನ್ನು ಗುರುವಾಗಿ ಸ್ವೀಕರಿಸಿದ ಶ್ರೀಗಳು ತಮ್ಮ ಪಯಣವನ್ನು ಸಜ್ಜನಗಡದತ್ತ ಬೆಳೆಸಿದರು. ಶ್ರೀ ರಾಮ ಸ್ಮರಣೆ ಮಾಡುತ್ತಾ ಹೊರಟವರಿಗೆ ದಾರಿಯಲ್ಲಿ ಅಡ್ಡಿಯಾದ ಕಲ್ಲು-ಮುಳ್ಳು, ಮಳೆ-ಗಾಳಿ ಯಾವ ಲೆಕ್ಕಕ್ಕೂ ಸಿಗಲಿಲ್ಲ. ಶ್ರೀಸಮರ್ಥ ರಾಮದಾಸರು ಛತ್ರಪತಿ ಶಿವಾಜಿಯ ಗುರುಗಳು. ಇವರು ಹನುಮಂತನ ಅವತಾರವೆಂದೇ ಪ್ರಸಿದ್ಧಿ ಇದೆ. ಮಾನಸಿಕವಾಗಿ ಇವರನ್ನು ಗುರುಗಳಾಗಿ ಪಡೆದ ಶ್ರೀಧರ ಸ್ವಾಮಿಗಳು(Sridhara Swami ) ಹನುಮ ರಾಮನಲ್ಲಿ ತೋರಿಸಿದ ಭಕ್ತಿಯನ್ನು ತಮ್ಮ ಭಕ್ತಿಯ ರೀತಿಯಿಂದ ಮತ್ತೊಮ್ಮೆ ನೆನಪಿಸಿದರು. ಕೆಲ ವಸಂತಗಳು ಸೇವೆಯ ನಂತರ ಗುರುಗಳ ಪ್ರೇರಣೆಯಂತೆ ದಕ್ಷಿಣ ಭಾರತದಲ್ಲಿ ಧರ್ಮ ಸಂಸ್ಥಾಪನೆಗಾಗಿ ತೆರಳಿದರು.

ಕನ್ನಡ, ಮರಾಠಿ, ಉರ್ದು, ಹಿಂದಿ, ಇಂಗ್ಲಿಷ್ನಲ್ಲಿ ಸರಾಗವಾಗಿ ಮಾತಾಡುತಿದ್ದ ಶ್ರೀಗಳು ಕರ್ನಾಟಕದ ಹಲವೆಡೆ ಸಂಚರಿಸಿದರು. ವಿಶೇಷವಾಗಿ ಮಂಜುಗುಣಿ, ಶಿರಸಿ, ಸೊರಬ, ಸಾಗರದಲ್ಲಿ ಜನರಿಗೆ ಉಪನ್ಯಾಸಗಳು, ಪ್ರವಚನಗಳನ್ನು ಮಾಡತೊಡಗಿದರು. ಶೀಗೇಹಳ್ಳಿಯ ಪರಮಾ ನಂದ ಮಠದಲ್ಲಿ ಶ್ರೀ ಶಿವಾನಂದ ಸ್ವಾಮಿಗಳಿಗೆ ದಾಸನಾಗಿ ಸೇವೆ ಸಲ್ಲಿಸಿದರು. ಅಲ್ಲಿಂದ ಹೊರಟು ಸಂಪೆಕಟ್ಟೆಯ ಮಠದಲ್ಲಿ 2 ತಿಂಗಳುಗಳ ಕಾಲ ಸೇವೆ ಮಾಡಿದರು. ನಂತರ ಕೊಡಚಾದ್ರಿಯ ಏಕಾಂತ ಸ್ಥಳದಲ್ಲಿ ಬಹುಕಾಲ ತಪಸ್ಸು ನಿರ್ವಿಘ್ನವಾಗಿ ನಡೆಯಿತು. ಅಲ್ಲಿಂದ ಬನವಾಸಿ ಹೀಗೆ ಅವರ ಧಾರ್ಮಿಕತೆ ಎಲ್ಲೆಡೆ ಪಸರಿಸತೊಡಗಿತು. ಶ್ರೀಸಮರ್ಥರ ಆಶಯದಂತೆ 1943ರ ವಿಜಯದಶಮಿಯಂದು ಶೀಗೇಹಳ್ಳಿಯಲ್ಲಿ ಲಲಿತಾ ಶಾಸ್ತ್ರೋಕ್ತ ವಿಧಿಯಿಂದ ಸನ್ಯಾಸವನ್ನು ಸ್ವೀಕರಿಸಿದರು. ಅಂದಿನಿಂದ ಭಕ್ತರು ಶ್ರೀಗಳನ್ನು ಶ್ರೀಮತ್ಪರಮಹಂಸ ಪರಿವ್ರಾಜಕಾಯ ಭಗವಾನ್ಶ್ರೀಶ್ರೀಧರಸದ್ಗುರು ಮಹಾರಾಜರು ಎಂದೇ ಸಂಭೋಧಿಸತೊಡಗಿದರು.

ಸಾಗರದ ಸಮೀಪದ ವರದಹಳ್ಳಿ (Varadahalli) ಎಂಬುದು ಒಂದು ಚಿಕ್ಕ ಗ್ರಾಮ. ಯಾರ ಗಮನವನ್ನೂ ಇದು ಸೆಳೆದಿರಲಿಲ್ಲ. ಸುತ್ತಲೂ ಬೆಟ್ಟಗಳು, ದೊಡ್ಡ ಕಾಡು, ಎತ್ತರವಾಗಿ ಬೆಳೆದ ಹೆಮ್ಮರಗಳು, ಬೆಟ್ಟಗಳ ನಡುವೆ ಹಳ್ಳಿಗರ ಬೆಳೆಸಿದ ಅಡಿಕೆ ತೋಟ, ಭತ್ತದ ಚಿಕ್ಕ ಗದ್ದೆಗಳು. ಇಲ್ಲಿರುವ ಜಗದಾಂಬ ಮಂದಿರ ಪ್ರಾಚೀನವಾದದ್ದು. ಬೆಟ್ಪದಲ್ಲಿರುವ ಒಂದು ಉದ್ದವಾದ ದೊಡ್ಡ ಗುಹೆಯನ್ನು ವ್ಯಾಸಗುಹೆ ಎನ್ನುತ್ತಾರೆ. ವ್ಯಾಸರ, ಅಗಸ್ತ್ಯರೂ ಅಲ್ಲಿ ತಪಸ್ಸು ಮಾಡಿದರೆಂದು ಜನರ ಹೇಳಿಕೆ. ಹಿಂದೆ ಇಲ್ಲೊಂದು ಸನ್ಯಾಸಿ ಮಠವಿದ್ದು ಉತ್ತರಾಧಿಕಾರಿಯಿಲ್ಲದೆ ಹಾಳು ಬಿದ್ದಿತ್ತು. ದೇವೀತೀರ್ಥ, ಅಗಸ್ತ್ಯತೀರ್ಥ ಎಂಬ ಎರಡು ಕೊಳಗಳಿದ್ದವು. ಶ್ರೀಗಳು ಧರ್ಮ ಜಾಗೃತಿಗಾಗಿ ಸಂಚಾರ ಮಾಡುತ್ತ 1953 ರಲ್ಲಿ ಇಲ್ಲಿಗೆ ಆಗಮಿಸಿದರು. ಇಲ್ಲಿ ಆಶ್ರಮ ನಿರ್ಮಸಬೇಕೆಂದು ಬಯಸಿ ಕೆಲ ದಿನಗಳಲ್ಲೇ ಜಗದಾಂಬ ದೇವಾಲಯದ ಹಿಂಬದಿಯಲ್ಲಿರುವ ಬೆಟ್ಟದ ಮೇಲೆ ಒಂದು ಕುಟೀರದ ನಿರ್ಮಾಣವಾಯಿತು. #ಶ್ರೀಧರಾಶ್ರಮ ಎಂದು ಹೆಸರಿಡಲಾಯಿತು. ಅಂದಿನಿಂದ ಅಲ್ಲಿಯ ಚಹರಿಯೇ ಬದಲಾಯಿತು. ಶ್ರೀಗಳ (Sridhara Swami ) ಭೇಟಿಗೆ ಜನಸಾಗರವೇ ಹರಿದು ಬರತೊಡಗಿತು.

ಚಿಕ್ಕಮಗಳೂರು,ದಾವಣಗೆರೆ,ಚಿತ್ರದುರ್ಗ,ಬೆಂಗಳೂರು,ದಕ್ಷಿಣ ಕನ್ನಡ , ಕಾಸರಗೋಡು, ರಾಮೇಶ್ವರ, ಕಾಶಿ, ಪ್ರಯಾಗ, ಮಹಾರಾಷ್ಟ್ರ, ಮುಂಬಯಿ, ಕೊಲ್ಲತ್ತಾ, ದೆಹಲಿ ಸೇರಿದಂತೆ ದೇಶದ ಸಾವಿರಾರು ಕಡೆ ಸಂಚರಿಸಿ ದೇವಾಲಯಗಳ ಕಲಾವೃದ್ಧಿಗೊಳಿಸಿ, ಭಕ್ತರಿಂದ ಪೂಜೆ ಸ್ವೀಕರಿಸಿ ಅದೇಷ್ಟೋ ಭಕ್ತರ ಕಷ್ಟಗಳನ್ನು ಪರಿಹರಿಸಿರುವ ಶ್ರೀಧರ ಸ್ವಾಮಿಗಳ ಮಹಿಮೆ ಅಪಾರವಾದದದ್ದು. ಬೆಂಗಳೂರಿನ ಉತ್ತರಹಳ್ಳಿಯ ವಸಂತ ವಲ್ಲಭರಾಯ ದೇವಾಲಯದಿಂದ ಸ್ವಲ್ಪ ದೂರದಲ್ಲಿ ಶ್ರೀಧರಾಶ್ರಮವೆಂಬ ಶ್ರೀಧರಸ್ವಾಮಿಗಳ (Sridhara Swami ) ಪಾದುಕಾ ಮಂದಿರವಿದ್ದು, ವರದಹಳ್ಳಿಯಲ್ಲಿ ಮಾದರಿಯಲ್ಲೇ ಪೂಜೆ ಪುನಸ್ಕಾರ ಹಾಗೂ ಪ್ರಸಾದ ವಿನಿಯೋಗ ನಡೆಯುತ್ತದೆ.

ಶ್ರೀಶ್ರೀಧರಸ್ವಾಮಿಗಳು ಬದುಕಿನ ಎಲ್ಲ ಘಟನೆಗಳು ಹಾಗೂ ಶ್ರೀಶ್ರೀಧರರು (Sridhara Swami ) ತಮ್ಮ ತಪೋಶಕ್ತಿಯಿಂದ ಮಾಡಿದ ಪವಾಡಗಳು ಹಾಗೂ ಭಕ್ತರ ಕಷ್ಟ ಬಗೆಹರಿಸಿದ ಘಟನೆಗಳನ್ನು ಪ್ರತ್ಯಕ್ಷವಾಗಿ ಕಂಡ ಭಕ್ತರು ಅನುಭವ ಆದರಿಸಿ ಶ್ರೀಶ್ರೀಧರಚರಿತ್ರೆ ಎಂಬ ಗ್ರಂಥ ರಚಿಸಲಾಗಿದೆ. ಇದು ನಾಡಿನ ಪ್ರಮುಖ ಬುಕ್ ಸ್ಟಾಲ್ಗಳಲ್ಲಿ ಲಭ್ಯವಿದ್ದು, ಶ್ರೀಗುರುವಿನ ಸಮಗ್ರ ಪರಿಚಯ ನೀಡಿ ಅವರ ಶಕ್ತಿ ಅರಿಯುವ ಅವಕಾಶ ಕಲ್ಪಿಸುತ್ತದೆ. ಸ್ವತಃ ಶ್ರೀಧರಸ್ವಾಮಿಗಳೇ ಹಲವು ಗ್ರಂಥ, ಸ್ತೋತ್ರ ಹಾಗೂ ಮಂತ್ರಗಳನ್ನು ರಚಿಸಿದ್ದಾರೆ.

ಸನ್ಯಾಸತ್ವ ಸ್ವೀಕಾರದ 26 ವರ್ಷಗಳ ನಂತರ ಘೋರ ತಪಸ್ಸಿಗೆ ಕೂರುವ ನಿರ್ಧಾರ ಮಾಡಿದ ಶ್ರೀಗಳು ವರದಹಳ್ಳಿಯ ಕುಟೀರದ ಬಳಿ ತಮಗಾಗಿಯೇ ನಿರ್ಮಿಸಿದ ಪ್ರತ್ಯೇಕ ಕುಟೀರದಲ್ಲಿ ತಪಸ್ಸಿಗೆ ಕೂತರು. ಚೈತ್ರ ಬಹುಳ ಬಿದಿಗೆ ಗುರುವಾರ (ತಾ 19-4-1973) ದಂದು ಭಗವಾನ್ ಶ್ರೀಧರ ಸ್ವಾಮಿಗಳು (Sridhara Swami ) ಪಾರ್ಥಿವ ದೇಹವನ್ನು ತ್ಯಜಿಸಿದರು.ಇಂದು ಸಾವಿರಾರು ಭಕ್ತರು ಪ್ರತಿದಿನ ಶ್ರೀಗಳ ಸಮಾಧಿ ಸ್ಥಳದ ದರ್ಶನಕ್ಕೆ ದೌಡಾಯಿಸುತ್ತಾರೆ. ಶ್ರೀಗಳು ಸ್ಥಾಪಿಸಿದ ಗೋಶಾಲೆಯಲ್ಲಿ ಗೋಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನೂರಾರು ಭಕ್ತರು ಭಕ್ತಿಯಿಂದ ಪ್ರಸಾದದ ರೂಪವಾಗಿ ನೀಡಿಲಾಗುತ್ತಿರುವ ಭೋಜನ ಸ್ವೀಕರಿಸುತ್ತಾರೆ. ಶ್ರೀಶ್ರೀಧರು ದೈಹಿಕವಾಗಿ ಅಲ್ಲಿ ಇಲ್ಲದೇ ಇದ್ದರೂ ಅವರ ತಪೋಶಕ್ತಿ ಹಾಗೂ ಆತ್ಮ ಅಲ್ಲಿಯೇ ಇದ್ದು, ನೊಂದ ಭಕ್ತರ ಕಣ್ಣೀರು ಒರೆಸಿ ಕಷ್ಟ ಪರಿಹರಿಸುವ ಪುಣ್ಯಕಾರ್ಯದಲ್ಲಿ ನಿರತವಾಗಿದೆ ಎಂಬುದು ಭಕ್ತರ ಅಚಲವಾದ ನಂಬಿಕೆ.
ಇದನ್ನೂ ಓದಿ : ಇಲ್ಲಿ ಪ್ರತಿ ರಾತ್ರಿ ನಡೆಯುತ್ತೆ ಭಗವಂತನ ರಾಸಲೀಲೆ – ನೋಡೋಕೆ ಹೋದವರಿಗೆ ಏನಾಗುತ್ತೆ ?
ಇದನ್ನೂ ಓದಿ : ನಾಗದೋಷದಿಂದ ಮುಕ್ತಿ ನೀಡುತ್ತಾನೆ ಇಲ್ಲಿನ 16 ಅಡಿ ನಾಗರಾಜ
(Shri Sridhara Swami Ashram, Varadahalli, Shimoga Yati Srishidhara, who cultivated a devotee’s life to erase the evils )